ಬೆಂಗಳೂರು: ಕಾರು ನಿಲ್ಲಿಲುವ ವೇಳೆ ಏರ್ಪಟ್ಟ ಜಗಳ ತಾರಕಕ್ಕೇರಿ ಕೊಲೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಸ್ಮಾಯಿಲ್ ಖಾನ್(26)ನನ್ನು ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಆಸ್ತಿ ಹಂಚಿಕೆ ವಿಚಾರದ ವೈಷಮ್ಯದ ನಡುವೆ ಕಾರು ನಿಲ್ಲಿಸುವ ವೇಳೆ ಜಗಳದಲ್ಲಿ ಚಾಕುವಿನಿಂದ ಇರಿದು ಇಸ್ಮಾಯಿಲ್ ಖಾನ್ ನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಯ್ಯದ್ ಹಿದಾಯತ್ ಶಾ, ಸಯ್ಯದ್ ಅಜೀಂ ಶಾ, ಸಯ್ಯದ್ ಅಖಿಲ್ ಶಾ ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ಹಲವು ದಿನಗಳಿಂದ ದಾಯಾದಿಗಳ ಮಧ್ಯೆ ಆಸ್ತಿ ವಿಚಾರಕ್ಕೆ ಕಲಹ ನಡೆಯುತ್ತಿದ್ದು, ಈ ನಡುವೆ ಮನೆ ಮುಂದೆ ಕಳೆದ ರಾತ್ರಿ ಕಾರು ನಿಲ್ಲಿಸುವ ವಿಚಾರಕ್ಕೆ ಜಗಳ ಉಂಟಾಗಿದೆ. ಬಳಿಕ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಡ್ರಾಗರ್ ನಿಂದ ಎದೆ ಮತ್ತು ಮೂತ್ರಪಿಂಡ ಜಾಗಕ್ಕೆ ಇರಿದು ಹಲ್ಲೆ ಮಾಡಲಾಗಿದ್ದು, ಸ್ಥಳದಲ್ಲೇ ಇಸ್ಮಾಯಿಲ್ ಖಾನ್ ಸಾವನ್ನಪ್ಪಿದ್ದಾನೆ.
ಕೊಲೆ ನಡೆಸಿ ಬಳಿಕ ಆರೋಪಿಗಳು ಪರಾರಿಯಾಗಿದ್ದು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿರುವ ಅನುಗೊಂಡನಹಳ್ಳಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Advertisement