ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ಇಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಪಂಚಮಸಾಲಿ ಸಮುದಾಯದ ಧರ್ಮಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
“ಲಿಂಗಾಯತ ಮೀಸಲಾತಿ ಹೆಚ್ಚಿಸುವ ಸಂಪುಟ ನಿರ್ಧಾರ ನಮಗೆ ತಲುಪಿಲ್ಲ. ಹೀಗಾಗಿ ಸಮುದಾಯದವರು ವಿಜಯವೆಂದು ಆಚರಿಸಬಾರದು. ಮೀಸಲಾತಿಗಾಗಿ 25 ವರ್ಷದಿಂದ ಕಾಯುತ್ತಿದ್ದೇವೆ. ಇನ್ನೂ ಕೆಲ ಗಂಟೆಗಳ ಕಾಲ ಕಾಯೋಣ. ಶನಿವಾರದಂದು ಸಮುದಾಯದ ಸದಸ್ಯರೊಂದಿಗೆ ಸಭೆ ನಡೆಸಲಾಗುತ್ತಿದ್ದು, ಸಭೆಯಲ್ಲಿ ನಿರ್ಧಾರ ಕೈಗೊಳ್ಳಳಾಗುತ್ತದೆ ಎಂದು ಹೇಳಿದ್ದಾರೆ.
ಪಂಚಮಸಾಲಿಗಳು ಸೇರಿದಂತೆ ಲಿಂಗಾಯತರಿಗೆ ಶೇ 7ರಷ್ಟು ಮೀಸಲಾತಿ ನೀಡಲು ಸಂಪುಟ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದರು.
ಶನಿವಾರ ಈ ಬಗ್ಗೆ ಚರ್ಚೆ ಮಾಡಿ ಲೀಗಲ್ ಟೀಂಗೆ ಕಳುಹಿಸುತ್ತೇವೆ. ಅವರ ಸಲಹೆ ಮೇರೆಗೆ ಹೋರಾಟ ಮುಂದುವರೆಸಬೇಕಾ? ಅಥವಾ ಬೇಡವಾ? ಎಂದು ಕಾರ್ಯಾಕಾರಿಣಿ ಸಭೆ ಬಳಿಕ ತಿಳಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಬಿಜೆಪಿಯ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ಕಾಂಗ್ರೆಸ್ನ ವಿಜಯಾನಂದ ಕಾಶಪ್ಪನವರ, ಕಾನೂನು ಸಮಿತಿ ಸೇರಿದಂತೆ ಸಮಾಜದ ಮುಖಂಡರ ಜತೆ ಚರ್ಚಿಸಿದ ನಂತರವೇ ಧರಣಿ ಮುಂದುವರಿಸುವ ಕುರಿತು ತೀರ್ಮಾನಿಸಲಾಗುವುದು ಎಂದರು.
Advertisement