ಕೆಲಸಕ್ಕೆ ಹಿಂತಿರುಗಿ, ಇಲ್ಲವಾದರೆ ವಜಾ: ಮುಷ್ಕರ ನಿರತ ಗುತ್ತಿಗೆ ಕಾರ್ಮಿಕರಿಗೆ ಎನ್‌ಎಚ್‌ಎಂ ಎಚ್ಚರಿಕೆ

ಮುಷ್ಕರವನ್ನು ಹಿಂತೆಗೆದುಕೊಂಡು ಕೆಲಸಕ್ಕೆ ಮರಳಬೇಕು ಅಥವಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು 40 ದಿನಗಳಿಂದ ಮುಷ್ಕರ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿಯ ಗುತ್ತಿಗೆ ನೌಕರರಿಗೆ ಅಂತಿಮ ಎಚ್ಚರಿಕೆಯನ್ನು ನೀಡಲಾಗಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್
ರಾಷ್ಟ್ರೀಯ ಆರೋಗ್ಯ ಮಿಷನ್

ಬೆಂಗಳೂರು: ಮುಷ್ಕರವನ್ನು ಹಿಂತೆಗೆದುಕೊಂಡು ಕೆಲಸಕ್ಕೆ ಮರಳಬೇಕು ಅಥವಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು 40 ದಿನಗಳಿಂದ ಮುಷ್ಕರ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿಯ ಗುತ್ತಿಗೆ ನೌಕರರಿಗೆ ಅಂತಿಮ ಎಚ್ಚರಿಕೆಯನ್ನು ನೀಡಲಾಗಿದೆ.

ಎನ್ಎಚ್ಎಂ ಹೊರಡಿಸಿದ ಪತ್ರಿಕಾ ಪ್ರಕಟಣೆಯು, ತುರ್ತು ಸಭೆಯನ್ನು ಆಯೋಜಿಸಲು ಮತ್ತು 48 ಗಂಟೆಗಳ ಒಳಗೆ ಕೆಲಸಕ್ಕೆ ಹಿಂತಿರುಗದ ಎಲ್ಲಾ ಕಾರ್ಮಿಕರನ್ನು ವಜಾಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘಕ್ಕೆ ಸೂಚಿಸಿದೆ.
ಕಾಯಂ ನೌಕರರಿಗೆ ನೀಡಲಾಗುವ ವೇತನ ನೀಡುವಂತೆ ಒತ್ತಾಯಿಸಿ ಫೆಬ್ರುವರಿ 13 ರಿಂದ ರಾಜ್ಯದಲ್ಲಿ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆಯು ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದಾಗ ಮಾತ್ರ ಅನಿರ್ದಿಷ್ಟಾವಧಿ ಮುಷ್ಕರ ಕೊನೆಗೊಳ್ಳಲಿದೆ ಎಂದು ಎನ್‌ಎಚ್‌ಎಂ ನೌಕರರು ತಿಳಿಸಿದ್ದಾರೆ. 

ಮಾರ್ಚ್ 4ರ ಆದೇಶದಲ್ಲಿ ಗುತ್ತಿಗೆ ನೌಕರರಿಗೆ ಶೇ 15ರಷ್ಟು ವೇತನ ಹೆಚ್ಚಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆದೇಶದ ಪ್ರಕಾರ, ಸೇರ್ಪಡೆಯ ಸಮಯದಲ್ಲಿ 20,000 ರೂ. ಗಿಂತ ಕಡಿಮೆ ಮಾಸಿಕ ವೇತನ ಹೊಂದಿರುವವರಿಗೆ ಮತ್ತು ಐದು ವರ್ಷಗಳ ಅನುಭವ ಹೊಂದಿರುವ ವೈದ್ಯಕೀಯ ಅಧಿಕಾರಿಗಳಿಗೆ ಈ ಹೆಚ್ಚಳ ಅನ್ವಯಿಸುತ್ತದೆ. ಎನ್ಎಚ್ಎಂ ಗುತ್ತಿಗೆ ತಜ್ಞರಿಗೆ, 3-5 ವರ್ಷಗಳ ಅನುಭವ ಹೊಂದಿರುವವರಿಗೆ ಶೇ 5 ರಷ್ಟು, 5-10 ವರ್ಷಗಳ ಅನುಭವ ಹೊಂದಿರುವವರಿಗೆ ಶೇ 10 ಮತ್ತು 15 ವರ್ಷಗಳ ಅನುಭವ ಹೊಂದಿರುವವರಿಗೆ ಶೇ 15ರಷ್ಟು ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ.

ಈ ಪ್ರಸ್ತಾಪದಿಂದ ಅತೃಪ್ತಿ ಹೊಂದಿದ್ದ ಎನ್ಎಚ್ಎಂ ನೌಕರರು, ಮುಷ್ಕರವನ್ನು ಮುಂದುವರೆಸಿದರು ಮತ್ತು ಎಲ್ಲ ಕಾರ್ಮಿಕರನ್ನು ಕಾಯಂಗೊಳಿಸಬೇಕು, ಕಾಯಂ ನೌಕರರಿಗೆ ಸಮಾನ ಹಕ್ಕು ನೀಡಬೇಕು ಎಂದು ಒತ್ತಾಯಿಸಿದರು. 

ಎನ್‌ಎಚ್‌ಎಂನ ನಿರ್ದೇಶಕ ಡಾ. ನವೀನ್ ಭಟ್ ಟಿಎನ್‌ಐಇ ಜೊತೆಗೆ ಮಾತನಾಡಿ, ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆಯನ್ನು ಜಾರಿಗೊಳಿಸಿದರೂ ಕಾರ್ಮಿಕರು ಮುಷ್ಕರದಿಂದ ಹಿಂತಿರುಗಲಿಲ್ಲ. ಉಡುಪಿಯಲ್ಲಿ ಮುಷ್ಕರ ಹಿಂಪಡೆದಿದ್ದು, ಇತರೆ ಜಿಲ್ಲೆಗಳಲ್ಲೂ ನೌಕರರು ಕೆಲಸಕ್ಕೆ ಮರಳುತ್ತಿದ್ದಾರೆ ಎಂದು ಹೇಳಿದರು.

ಇತರ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಮಣಿಪುರ ಮಾತ್ರ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಿರುವುದು ಕಂಡುಬಂದಿದೆ. ಅಲ್ಲಿನ ಕಡಿಮೆ ಜನಸಂಖ್ಯೆಯು ಅದನ್ನು ಕಾರ್ಯಗತಗೊಳಿಸಲು ಅವರಿಗೆ ಸುಲಭವಾಯಿತು. ಕಾರ್ಮಿಕರ ಬೇಡಿಕೆಗಳನ್ನು ಆರೋಗ್ಯ ಇಲಾಖೆ ಪರಿಗಣಿಸುತ್ತಿದೆ. ಆದರೆ ಅವರು ಕೆಲಸಕ್ಕೆ ಹಿಂತಿರುಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com