ಬೆಳಗಾವಿ: ಮಹಾರಾಷ್ಟ್ರವು ಕರ್ನಾಟಕದ ಕೃಷ್ಣಾ ನದಿಗೆ 3 ಟಿಎಂಸಿ ನೀರು ಬಿಡುತ್ತಿರುವುದಕ್ಕೆ ಅವರ ನನ್ನ ಪ್ರಯತ್ನವೇ ಕಾರಣ ಎಂದು ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಅವರು ಮಂಗಳವಾರ ಹೇಳಿದ್ದಾರೆ.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿಗೆ ನೀರು ಹರಿಸುವಂತೆ ಈ ಹಿಂದೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಸಂಪರ್ಕಿಸಲಾಗಿತ್ತು. ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಮನವಿ ಪತ್ರವನ್ನೂ ಸಲ್ಲಿಸಿದ್ದೆ ಎಂದು ಹೇಳಿದ್ದಾರೆ.
ಬಸವೇಶ್ವರ ಏತ ನೀರಾವರಿ ಯೋಜನೆ (ಬಿಎಲ್ ಐಎಸ್ ) ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಹಾಗೂ ಚುನಾವಣಾ ನೀತಿ ಸಂಹಿತೆಯಿಂದಾಗಿ ಅದರ ಅನುಷ್ಠಾನ ಕಾರ್ಯ ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ.
ಯೋಜನೆಗೆ ಸರ್ಕಾರ ಸಂಪೂರ್ಣ ಹಣ ಬಿಡುಗಡೆ ಮಾಡದ ಕಾರಣ ಬಿಎಲ್ಐಎಸ್ ಕಾಮಗಾರಿ ಸ್ಥಗಿತಗೊಳ್ಳಬೇಕಿತ್ತು. ಆದರೆ, ಯೋಜನೆ ಕಾಮಗಾರಿ ನಿಲ್ಲುವುದು ಬೇಡ ನಾನು ವೈಯಕ್ತಿಯವಾಗಿ ಯೋಜನೆಗೆ 6 ಕೋಟಿ ರೂ ನೀಡಿದ್ದೇನೆ. ಇದಲ್ಲದೆ, ಯೋಜನೆಯ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನನ್ನ ಕಾರ್ಖಾನೆಯಿಂದ ಸುಮಾರು 400 ಕಾರ್ಮಿಕರನ್ನು ಕಳುಹಿಸಲಾಗಿತ್ತು ಎಂದು ಹೇಳಿದರು.
ತೂಕದ ಯಂತ್ರದ ಮೂಲಕ ಕಬ್ಬು ಬೆಳೆಗಾರರಿಗೆ ವಂಚಿಸಲಾಗುತ್ತಿದೆ ಎಂದ ಆರೋಪ ಕುರಿತು ಪ್ರತಿಕ್ರಿಯಿಸಿ, ಆರೋಪ ಆಧಾರ ರಹಿತವಾಗಿದೆ. ನನ್ನ ಸಕ್ಕರೆ ಕಾರ್ಖಾನೆಯಲ್ಲಿನ ಎಲ್ಲಾ ವ್ಯವಹಾರಗಳು ಮತ್ತು ಕಾರ್ಯವಿಧಾನಗಳು ಪಾರದರ್ಶಕವಾಗಿವೆ ಎಂದು ತಿಳಿಸಿದರು.
Advertisement