ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿನಲ್ಲಿ ತಮ್ಮ ಮೆಗಾ ರೋಡ್ ಶೋ ನಡೆಸಿದರು. ಟ್ರಿನಿಟಿ ಸರ್ಕಲ್ನಲ್ಲಿ ರೋಡ್ ಶೋ ಮುಕ್ತಾಯಗೊಂಡ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಹೋಟೆಲ್ಗೆ ತಲುಪಲು ಡೆಲಿವರಿ ಬಾಯ್ನ ಸ್ಕೂಟರ್ನಲ್ಲಿ ಹಿಂಬದಿ ಸವಾರರಾಗಿ ಪ್ರಯಾಣ ಬೆಳೆಸಿದ್ದಾರೆ.
ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯ ರಾಜಧಾನಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲು ನಿರ್ಧರಿಸಿರುವ ರಾಹುಲ್, ಡೆಲಿವರಿ ಬಾಯ್ನ ಸ್ಕೂಟರ್ನಲ್ಲಿ ಸುಮಾರು 2 ಕಿ.ಮೀ. ಪ್ರಯಾಣಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು, ಎಲ್ಲಾ ಪಕ್ಷಗಳು ತಮ್ಮ ಪ್ರಚಾರದ ಕೊನೆಯ ಹಂತಗಳಲ್ಲಿ ಸಾಗುತ್ತಿವೆ. ಮತದಾರರನ್ನು ಓಲೈಸಲು ಎಲ್ಲಾ ರೀತಿಯ ಕಸರತ್ತುಗಳನ್ನು ನಡೆಸುತ್ತಿವೆ.
ಈಮಧ್ಯೆ, ಪ್ರಧಾನಿ ಮೋದಿ ಭಾನುವಾರ ನಗರದಲ್ಲಿ ಮೆಗಾ ರೋಡ್ಶೋ ನಡೆಸಿದರು. ರಸ್ತೆಯಲ್ಲಿ ಮಾರ್ಗದ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನರತ್ತ ಕೈ ಬೀಸಿದರು.
ಹೊಸ ತಿಪ್ಪಸಂದ್ರ ರಸ್ತೆಯಲ್ಲಿರುವ ಕೆಂಪೇಗೌಡ ಪ್ರತಿಮೆಯಿಂದ ಪ್ರಧಾನಿ ತಮ್ಮ ರೋಡ್ಶೋ ಅನ್ನು ಪ್ರಾರಂಭಿಸಿದರು ಮತ್ತು ಇದು ಟ್ರಿನಿಟಿ ವೃತ್ತದಲ್ಲಿ ಮುಕ್ತಾಯಗೊಂಡಿತು.
ಸತತ ಎರಡನೇ ದಿನ ಬೆಂಗಳೂರಿನಲ್ಲಿ ಸುಮಾರು 10 ಕಿಲೋಮೀಟರ್ ಉದ್ದದ ರೋಡ್ಶೋ ಕೈಗೊಂಡ ಮೋದಿಯವರಿಂದ ಮೇ 10ರಂದು ನಡೆಯಲಿರುವ ಚುನಾವಣೆಯ ಕೊನೆಯ ಹಂತದ ಪ್ರಚಾರವು ಬಿಜೆಪಿಯ ಚುನಾವಣಾ ಭವಿಷ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
Advertisement