ಬೆಂಗಳೂರು: ನಗರದಾದ್ಯಂತ ನಮ್ಮ ಮೆಟ್ರೊ ಕಾಮಗಾರಿಗೆ ಬಡಗಿಗಳು, ಮೇಸ್ತ್ರಿಗಳು ಮತ್ತು ಬಾರ್ ಬೆಂಡಿಂಗ್ ಕೆಲಸ ಮಾಡುವ ಕಾರ್ಮಿಕರ ತೀವ್ರ ಕೊರತೆಯನ್ನು ಎದುರಿಸುತ್ತಿವೆ, ಇದು ಹಲವು ಮೆಟ್ರೊ ಮಾರ್ಗಗಳಲ್ಲಿ ಕೆಲಸದ ವೇಗವನ್ನು ನಿಧಾನಗೊಳಿಸುತ್ತಿದೆ ಎಂದು ಬಿಎಂಆರ್ಸಿಎಲ್ ಉನ್ನತ ಅಧಿಕಾರಿಗಳು ಮತ್ತು ಯೋಜನಾ ಗುತ್ತಿಗೆದಾರರು ಹೇಳಿದ್ದಾರೆ.
ಪೂರ್ವ ಕೋವಿಡ್ ಅವಧಿಗಿಂತ ಭಿನ್ನವಾಗಿ ಈಗ ಒಪ್ಪಂದಗಳನ್ನು ಪಡೆದ ಸಂಸ್ಥೆಗಳು ಭಾರತದ ಪೂರ್ವ ಭಾಗದಿಂದ ಕಾರ್ಮಿಕರನ್ನು ಕರೆತರಲು ಎಸಿ ರೈಲು ದರವನ್ನು ಪಾವತಿಸಲು ಸಿದ್ಧವಾಗಿವೆ, ಆದರೆ ನುರಿತ ಕಾರ್ಮಿಕರು ಸಿಗುವುದು ಕಷ್ಟವಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನ ಯೋಜನೆಗಳು ಮತ್ತು ಯೋಜನಾ ನಿರ್ದೇಶಕರಾದ ಡಿ ರಾಧಾಕೃಷ್ಣ ರೆಡ್ಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ಮಾತನಾಡುತ್ತಾ, “ನಮಗೆ ಪ್ರಸ್ತುತ ನಗರದಾದ್ಯಂತ ನಮ್ಮ ಮೆಟ್ರೋ ಯೋಜನೆಗಳಿಗೆ ಸುಮಾರು 300 ಕಾರ್ಪೆಂಟರ್ಗಳು, 400 ಬಾರ್ ಬೆಂಡರ್ಗಳು ಮತ್ತು 200 ಮೇಸ್ತ್ರಿಗಳ ಅಗತ್ಯವಿದೆ. ಕುಶಲ ಕಾರ್ಮಿಕರು ಸಿಗದೆ ಇದು ಹಂತ 2ಎ (ಸಿಲ್ಕ್ ಬೋರ್ಡ್ನಿಂದ ಕೆಆರ್ ಪುರಂ), ಹಂತ 2ಬಿ (ಕೆಆರ್ ಪುರಂನಿಂದ ಕೆಐಎ) ಹಾಗೂ ಆರ್ವಿ ರಸ್ತೆಯಿಂದ ಬೊಮ್ಮಸಂದ್ರ (ರೀಚ್-6) ಮಾರ್ಗಗಳ ಕಾಮಗಾರಿಯ ವೇಗವನ್ನು ಕುಂಠಿತಗೊಳಿಸಿದೆ ಎಂದು ಅವರು ಹೇಳಿದರು.
ದೇಶಾದ್ಯಂತ ಮೆಟ್ರೊ ಸಂಪರ್ಕಜಾಲ ವಿಸ್ತರಿಸುತ್ತಿರುವುದರಿಂದ ನಿರ್ದಿಷ್ಟ ಕೌಶಲ್ಯ ಹೊಂದಿರುವ ಕಾರ್ಮಿಕರಿಗೆ ಭಾರಿ ಬೇಡಿಕೆಯಿದೆ. ಕೆಲವರು ಭೋಪಾಲ್, ಚೆನ್ನೈ, ಮುಂಬೈ, ದೆಹಲಿ ಮತ್ತು ಅಹಮದಾಬಾದ್ ಮೆಟ್ರೋ ಯೋಜನೆಗಳಿಗೆ ತೆರಳುತ್ತಿದ್ದಾರೆ ಎಂದು ರೆಡ್ಡಿ ಹೇಳಿದರು.
2ಎ ಹಂತದ ಸಿಲ್ಕ್ ಬೋರ್ಡ್ನಿಂದ ಕಾಡುಬೇಸನಹಳ್ಳಿ ಪ್ಯಾಕೇಜ್ನಿಂದ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಕಾರ್ಮಿಕರ ಕೊರತೆ ಎದುರಿಸುತ್ತಿದ್ದಾರೆ. ನಮ್ಮ ಯೋಜನೆಗಳಿಗೆ ಹೆಚ್ಚಿನ ನುರಿತ ಕೆಲಸಗಾರರು ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಬರುತ್ತಾರೆ. ನಾವು ಈಗ ಕೆಲಸದಲ್ಲಿ ಸುಮಾರು 300 ಕಾರ್ಮಿಕರನ್ನು ಹೊಂದಿದ್ದೇವೆ. ಜೂನ್ 10 ಮತ್ತು 15 ರ ನಡುವೆ ಯಾವುದೇ ಸಮಯದಲ್ಲಿ ಇನ್ನೂ 250 ಜನರು ಬರಬಹುದು. ಕಾರ್ಮಿಕರಿಗೆ ಎಸಿ ದರ, ಅಥವಾ ತತ್ಕಾಲ್ ದರ ಅಥವಾ ಯಾವುದೇ ಸಾರಿಗೆ ವೆಚ್ಚವನ್ನು ಪಾವತಿಸಲು ಸಿದ್ಧರಿದ್ದೇವೆ. ಕೋವಿಡ್ಗೆ ಮೊದಲು ನಾವು ಪ್ರಯಾಣ ದರವನ್ನು ಪಾವತಿಸುತ್ತಿರಲಿಲ್ಲ, ಈಗ ಕೊರತೆಯಿದೆ ಎನ್ನುತ್ತಾರೆ.
ಏರ್ಪೋರ್ಟ್ ಲೈನ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಇನ್ನೊಬ್ಬ ಗುತ್ತಿಗೆದಾರರು, ನಮ್ಮ ಯೋಜನೆಗಳಿಗೆ ಸ್ಟೀಲ್ ಬೆಂಡರ್ಗಳು ಮತ್ತು ಕೆಲಸಗಳನ್ನು ಮಾಡಬಲ್ಲ ನುರಿತ ಜನರು ನಿರ್ಣಾಯಕರಾಗಿದ್ದಾರೆ. ಯು-ಗಿರ್ಡರ್ಗಳು, ಪಿಯರ್ ಕ್ಯಾಪ್ಗಳು ಅಥವಾ ಪೈಲ್ ಕ್ಯಾಪ್ಗಳು ಆಗಿರಲಿ, ಸ್ಟೀಲ್ ನ್ನು ಸಿದ್ಧಪಡಿಸುವುದು ಮತ್ತು ಕಾಂಕ್ರೀಟ್ ಮಾಡುವ ನಡುವೆ ನಾವು ಫಾರ್ಮ್ವರ್ಕ್ (ಶಟ್ಟರಿಂಗ್) ಮಾಡಬೇಕಾಗಿದೆ. ಪ್ರಸ್ತುತ ಇರುವ ಕಾರ್ಮಿಕರೊಂದಿಗೆ ನಿರ್ವಹಿಸುತ್ತಿದ್ದೇವೆ, ಪೂರ್ವ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕಾರ್ಮಿಕರ ಕೊರತೆಯನ್ನು ಎಲ್ಲಾ ಗುತ್ತಿಗೆದಾರರು ಮತ್ತು ದೇಶಾದ್ಯಂತ ಎಲ್ಲಾ ಯೋಜನೆಗಳಲ್ಲಿ ಅನುಭವಿಸುತ್ತಾರೆ ಎಂದು ಅವರು ಹೇಳಿದರು. ಕೋವಿಡ್ ಅವಧಿಯಲ್ಲಿ ನೂರಾರು ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ. ಮೆಟ್ರೊ ಯೋಜನೆಗಳ ಕಾಮಗಾರಿ ಮುಗಿಯಲು 2024ರವರೆಗೆ ಸಮಯಾವಕಾಶ ಇದೆ.
Advertisement