ಅರಕಲಗೂಡು: ಪೊಲೀಸ್ ಅಧಿಕಾರಿಯ ಮನೆಗೇ ಬೆಂಕಿ ಇಟ್ಟ ಕಿಡಿಗೇಡಿಗಳು

ದುಷ್ಕರ್ಮಿಗಳ ತಂಡವೊಂದು ಪೊಲೀಸ್ ಅಧಿಕಾರಿಯೊಬ್ಬರ ಮನೆಗೇ ಬೆಂಕಿ ಇಟ್ಟಿರುವ ಆತಂಕಕಾರಿ ಘಟನೆ ಹಾಸನದಲ್ಲಿ ವರದಿಯಾಗಿದೆ.
ಪೊಲೀಸ್ ಅಧಿಕಾರಿ ಮನೆಗೆ ಬೆಂಕಿ
ಪೊಲೀಸ್ ಅಧಿಕಾರಿ ಮನೆಗೆ ಬೆಂಕಿ

ಹಾಸನ: ದುಷ್ಕರ್ಮಿಗಳ ತಂಡವೊಂದು ಪೊಲೀಸ್ ಅಧಿಕಾರಿಯೊಬ್ಬರ ಮನೆಗೇ ಬೆಂಕಿ ಇಟ್ಟಿರುವ ಆತಂಕಕಾರಿ ಘಟನೆ ಹಾಸನದಲ್ಲಿ ವರದಿಯಾಗಿದೆ.

ಹಾಸನದ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ವಾಸವಿದ್ದ ಮನೆಗೆ ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಾಕಿದ್ದಾರೆ.  ಶುಕ್ರವಾರ ಬೆಳಗ್ಗೆ ಊರಿಗೆ ಹೋಗಿದ್ದ ಶೋಬಾ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಶೋಭಾ ಅವರನ್ನು ನಾಲ್ಕು ತಿಂಗಳ ಹಿಂದೆ ಹಾಸನ ವಿಸ್ತರಣಾ ಠಾಣೆಯಿಂದ ಕೊಣನೂರು ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

ಮೂಲಗಳ ಪ್ರಕಾರ ಕೊಣನೂರು ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶೋಭಾ ಭರಮಣ್ಣನವರ್ ಕೊಣನೂರು ಗ್ರಾಮದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಾಗಿದ್ದರು. ಮೇ.20ರಂದು ಮೇಲಧಿಕಾರಿಗಳಿಂದ ರಜೆ ಪಡೆದು ಗದಗ ಜಿಲ್ಲೆಯಾಲ್ಲಿರುವ ಸ್ವಂತ ಊರಿಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತ ದುಷ್ಕರ್ಮಿಗಳು ಹಳೇ ದ್ವೇಷದಿಂದ ರಾತ್ರಿ ಮನೆಯ ಹಿಂಭಾಗದ ರೂಂನ ಕಿಟಕಿಯ ಗಾಜನ್ನು ಒಡೆದು, ಸೀಮೆಎಣ್ಣೆ ರೂಂನ ಒಳಗೆ ಸುರಿದು, ಬೆಂಕಿ ಹಾಕಿದ್ದಾರೆ. ಪರಿಣಾಮ ಮನೆ ಒಳಭಾಗದಲ್ಲಿದ್ದ ವಸ್ತುಗಳೆಲ್ಲಾ ಸುಟ್ಟುಹೋಗಿದೆ. ಈ ಬಗ್ಗೆ ಬೆಳಗ್ಗೆ ವಿಷಯ ಗೊತ್ತಾಗಿ ನೆರೆ ಮನೆಯವರು ಶೋಭಾ ಭರಮಣ್ಣನವರ್ ಅವರಿಗೆ ಮಾಹಿತಿ ನೀಡಿದ್ದಾರೆ.

ಬೆಂಕಿ ಹಾಕಿದ್ದರಿಂದ ರೂಂನಲ್ಲಿದ್ದ ಸುಮಾರು 80 ಸಾವಿರ ಬೆಲೆಬಾಳುವ ಲ್ಯಾಪ್ ಟ್ಯಾಪ್, 25 ಸಾವಿರ ಬೆಲೆ ಬಾಳುವ ಡ್ರೆಸ್ಸಿಂಗ್ ಟೇಬಲ್, ಅದರ ಒಳಭಾಗದಲ್ಲಿದ್ದ ವಸ್ತುಗಳು, 60ಸಾವಿರ ಬೆಲೆಬಾಳುವ ಮರದ ಮಂಚ ಮತ್ತು ಹಾಸಿಗೆ, ವಿವಿಧ ದಾಖಲೆಗಳು ಹಾಗು ಸುಮಾರು 50ಸಾವಿರ ಬೆಲೆಬಾಳುವ ಬಟ್ಟೆಗಳು ಒಟ್ಟು 2.15 ಲಕ್ಷರೂ. ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಈ ಬಗ್ಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ಶೋಭಾ ಅವರು ದಾಖಲಿಸಿದ್ದಾರೆ.

ತೀವ್ರಗೊಂಡ ತನಿಖೆ
ಇನ್ನು ಘಟನೆಯನ್ನುಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರು ಸೇರಿದಂತೆ ಪೊಲೀಸ್ ತನಿಖಾ ತಂಡ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಎಲ್ಲಾ ಆಯಾಮಗಳಲ್ಲಿ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಸ್‌ಐ ಅವರಿಂದ ಪ್ರಕರಣಗಳ ಇತಿಹಾಸ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸ್ಥಳೀಯರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಾಸನದ ಪಿಡಬ್ಲ್ಯುಡಿ ಕ್ವಾರ್ಟರ್ಸ್‌ನಲ್ಲಿರುವ ಹಾಸನ ತಹಶೀಲ್ದಾರ್ ಅವರ ಮನೆಗೆ ದಶಕಗಳ ಹಿಂದೆ ದುಷ್ಕರ್ಮಿಗಳು ಇದೇ ರೀತಿ ಬೆಂಕಿ ಹಚ್ಚಲು ಯತ್ನಿಸಿದ್ದರು. ಅಧಿಕಾರಿಗಳ ಭಯ ಮೂಡಿಸಲು ದುಷ್ಕರ್ಮಿಗಳು ಇಂತಹ ಕೃತ್ಯವೆಸಗಿರಬಹುದು ಎಂದು ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com