ಮಡಿಕೇರಿ: ಬ್ಯಾಂಕ್ ಖಾತೆ ನಿಷ್ಕ್ರಿಯ; ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಕಿ.ಮೀ ಗಟ್ಟಲೆ ಸರತಿ ಸಾಲು!
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವುದಕ್ಕೆ ಮಹಿಳೆಯರು ಖಾಸಗಿ ಬ್ಯಾಂಕ್ ನ ಮುಂದೆ ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ಘಟನೆ ಮಡಿಕೇರಿಯಲ್ಲಿ ವರದಿಯಾಗಿದೆ.
Published: 04th September 2023 07:49 PM | Last Updated: 05th September 2023 08:19 PM | A+A A-

ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಕಿ.ಮೀ ಗಟ್ಟಲೆ ಸರತಿ ಸಾಲು!
ಮಡಿಕೇರಿ: ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವುದಕ್ಕೆ ಮಹಿಳೆಯರು ಖಾಸಗಿ ಬ್ಯಾಂಕ್ ನ ಮುಂದೆ ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ಘಟನೆ ಮಡಿಕೇರಿಯಲ್ಲಿ ವರದಿಯಾಗಿದೆ
ಬ್ಯಾಂಕ್ ಮುಂಭಾಗದಲ್ಲಿನ ಸರತಿ ಸಾಲು ಒಂದು ಕಿ.ಮೀ ವರೆಗೂ ವ್ಯಾಪಿಸಿತ್ತು ಎಂದು ತಿಳಿದುಬಂದಿದೆ. ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಮಾತನಾಡಿ, ನಾವು ಶನಿವಾರಸಂತೆಯಿಂದ ಬಂದಿದ್ದೇವೆ, ಬೆಳಿಗ್ಗೆ 8 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದೇವೆ ಎಂದು ಹೇಳಿದ್ದಾರೆ. ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿರುವುದಾಗಿ ಮೆಸೇಜ್ ಬಂದಿತ್ತು. 2021 ರಲ್ಲಿ ನಾವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆದಿದ್ದೆವು. ಆದರೆ ಹಲವು ತಿಂಗಳುಗಳಿಂದ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿದೆ. ನಾವು ಈಗ ಗೃಹಲಕ್ಷ್ಮಿಯ ಹಣವನ್ನು ಈಗ ಬ್ಯಾಂಕ್ ನಿಂದ ಪಡೆಯದೇ ಇದ್ದರೆ ಅದು ವಾಪಸ್ ಹೋಗುವ ಸಾಧ್ಯತೆ ಇದೆ ಎಂದು ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಹಲವಾರು ಇತರ ಮಹಿಳಾ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ಗಳನ್ನು ಖಾಸಗಿ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದು, ಈ ಬ್ಯಾಂಕ್ ಖಾತೆಗಳನ್ನು COVID ಸಮಯದಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ತೆರೆಯಲಾಗಿತ್ತು. ಆದಾಗ್ಯೂ, ಸಾಂಕ್ರಾಮಿಕ ಪರಿಸ್ಥಿತಿಯ ನಂತರ ಅವರು ಪ್ರಯೋಜನಗಳನ್ನು ಪಡೆಯುವುದನ್ನು ನಿಲ್ಲಿಸಿದ್ದರಿಂದ, ಬಳಕೆಯಾಗದ ಖಾತೆಗಳು ನಿಷ್ಕ್ರಿಯಗೊಂಡಿವೆ. ಜನ್ ಧನ್ ಯೋಜನೆಯಡಿ ಬ್ಯಾಂಕ್ ಗಳಲ್ಲಿ ತೆರೆದಿದ್ದ ಖಾತೆಗಳನ್ನು ಹಲವು ಫಲಾನುಭವಿಗಳು ಮರೆತುಹೋಗಿದ್ದಾರೆ. ಜನ್ ಧನ್ ಅಡಿಯಲ್ಲಿ 30,೦೦೦ ಖಾತೆಗಳನ್ನು ತೆರೆಯಲಾಗಿತ್ತು ಈಗ ಆ ಪೈಕಿ ಹಲವು ಖಾತೆಗಳು ನಿಷ್ಕ್ರಿಯಗೊಂಡಿವೆ, ಅವುಗಳು ಮತ್ತೆ ಚಾಲ್ತಿಯಾದಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡಲಿದ್ದೇವೆ. ಇದಕ್ಕಾಗಿ ಫಲಾನುಭವಿಗಳು ನಿಷ್ಕ್ರಿಯಗೊಂಡ ಖಾತೆಗಳ ಮರು ಆರಂಭಕ್ಕೆ ಅರ್ಜಿ ನೀಡಬೇಕು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.