ಕೇಂದ್ರ/ರಾಜ್ಯ ಸರ್ಕಾರಗಳ ಆರ್ಥಿಕ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಅಂಚೆ ಇಲಾಖೆಯಿಂದ ವಿಶಿಷ್ಟ ಅಭಿಯಾನ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೇವೆಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಕರ್ನಾಟಕ ಅಂಚೆ ಇಲಾಖೆ ಮುಂದಾಗಿದೆ.
Published: 04th September 2023 01:15 PM | Last Updated: 04th September 2023 04:06 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೇವೆಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಕರ್ನಾಟಕ ಅಂಚೆ ಇಲಾಖೆ ಮುಂದಾಗಿದೆ.
ಇದರ ಮೊದಲ ಭಾಗವಾಗಿ ಶಿರಸಿ ಅಂಚೆ ವಿಭಾಗವು ಮೂರು ದಿನಗಳ ಕಾಲ “ದಕ್ ಜನ ಸಂಪರ್ಕ ಅಭಿಯಾನ” ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಆಗಸ್ಟ್ 29 ರಿಂದ 31 ರವರೆಗೆ ಕಾಂಗೋಡು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಅಭಿಯಾನದಲ್ಲಿ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳು ಮತ್ತು ಅಂಚೆ ಜೀವ ವಿಮಾ ಸೌಲಭ್ಯಗಳು/ ಅಪಘಾತ ವಿಮಾ ಯೋಜನೆಗಳ ಮಾಹಿತಿಯನ್ನು ಜನರಿಗೆ ತಿಳಿಸಲಾಯಿತು. ಅಂಚೆ ಇಲಾಖೆಯ ಈ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಂಚೆಕಚೇರಿಗಳು ಎಂದಿಗೂ ಅಗತ್ಯ, ನಾವು ಯಾವಾಗಲೂ ವಿಕಸನಗೊಳ್ಳುತ್ತಲೇ ಇದ್ದೇವೆ: ಎಸ್ ರಾಜೇಂದ್ರ ಕುಮಾರ್ (ಸಂದರ್ಶನ)
200 ಕ್ಕೂ ಹೆಚ್ಚು ಜನರು ಈ ಉಳಿತಾಯ ಯೋಜನೆಗಳನ್ನು (ಉಳಿತಾಯ ಬ್ಯಾಂಕ್ ಖಾತೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ, ಸಾರ್ವಜನಿಕ ಭವಿಷ್ಯ ನಿಧಿ), ಅಂಚೆ ಜೀವ ವಿಮಾ ಸೇವೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ಜನರಲ್ಲಿ ಆರ್ಥಿಕತೆ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರದ ಸಾರ್ವಜನಿಕ ಸೇವೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಎಲ್ಲಾ ಅಂಚೆ ವಿಭಾಗಗಳಿಂದ ದಕ್ ಜನ ಸಂಪರ್ಕ ಅಭಿಯಾನವನ್ನು ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗುವುದು ಎಂದು ಅಂಚೆ ಇಲಾಖೆ ತಿಳಿಸಿದೆ.