ಟೊಮೇಟೊ ಬೆಲೆ ಇಳಿಕೆಯಿಂದ ರೈತರು ಕಂಗಾಲು; ಕೋಲಾರ ಮಾರುಕಟ್ಟೆಯಲ್ಲಿ ಕೆಜಿಗೆ 6-16 ರೂ.ಗೆ ಮಾರಾಟ
ಕೆಂಪು ಸುಂದರಿಯ ಯುಗ ಅಂತ್ಯವಾದಂತೆ ಭಾಸವಾಗುತ್ತಿದೆ. ಕಾರಣ ಇಷ್ಟೆ, ಕಳೆದ ಎರಡ್ಮೂರು ತಿಂಗಳ ಹಿಂದೆ ಕೆಜಿಗೆ 200 ರೂ.ಗೆ ಮಾರಾಟವಾಗುತ್ತಿದ್ದ ಟೊಮೇಟೊ ಬೆಲೆ ಇದೀಗ ಕುಸಿತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Published: 04th September 2023 07:44 AM | Last Updated: 04th September 2023 03:48 PM | A+A A-

ಸಾಂದರ್ಭಿಕ ಚಿತ್ರ
ಕೋಲಾರ: ಕೆಂಪು ಸುಂದರಿಯ ಯುಗ ಅಂತ್ಯವಾದಂತೆ ಭಾಸವಾಗುತ್ತಿದೆ. ಕಾರಣ ಇಷ್ಟೆ, ಕಳೆದ ಎರಡ್ಮೂರು ತಿಂಗಳ ಹಿಂದೆ ಕೆಜಿಗೆ 200 ರೂ.ಗೆ ಮಾರಾಟವಾಗುತ್ತಿದ್ದ ಟೊಮೇಟೊ ಬೆಲೆ ಇದೀಗ ಕುಸಿತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಏಷ್ಯಾದಲ್ಲಿಯೇ ಟೊಮೇಟೊಗಳಿಗೆ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಲಾದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊವನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಯಿತು. ಪೂರೈಕೆಯಲ್ಲಿ ಹೆಚ್ಚಳ ಉಂಟಾಗಿದ್ದು, ಬೆಲೆ ತೀವ್ರವಾಗಿ ಕುಸಿತ ಕಂಡಿದೆ. ಉತ್ತರ ಭಾರತ ಮತ್ತು ಆಂಧ್ರಪ್ರದೇಶದಲ್ಲಿ ಕಳೆದ ಎರಡು ವಾರಗಳಲ್ಲಿ ಬೇಡಿಕೆ ಕುಸಿದಿದೆ.
ಜುಲೈ ಮೊದಲ ವಾರದಲ್ಲಿ 15 ಕೆಜಿ ಟೊಮೇಟೊ ಇರುವ ಕ್ರೇಟ್ 2,400 ರೂ.ಗೆ ಮಾರಾಟವಾಗಿದ್ದು, ಇದೀಗ 100-240 ರೂ.ಗೆ (ಕೆಜಿಗೆ 6-16 ರೂ.) ಇಳಿದಿದೆ. ಗ್ರಾಹಕರಿಗೆ ಸಂತಸ ಎನಿಸಿದರೂ, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ಜೊತೆಗೆ ಮಾತನಾಡಿ, ಜಿಲ್ಲೆಯಲ್ಲಿ ಟೊಮೇಟೊ ಆಗಮನ ಹೆಚ್ಚಾಗಿದೆ. ಸದ್ಯ 8,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ಇನ್ನೂ 6,000 ಹೆಕ್ಟೇರ್ ಪ್ರದೇಶದಲ್ಲಿ ಟೊಮೇಟೊ ಬೆಳೆಯಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಪೂರೈಕೆ ಹೆಚ್ಚಳ: ರಾಜ್ಯದಲ್ಲಿ ಟೊಮೇಟೊ ಬೆಲೆಯಲ್ಲಿ ತೀವ್ರ ಕುಸಿತ, ಕೆಜಿ 20 ರೂ.ಗೆ ಮಾರಾಟ
ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾತನಾಡಿ, ಎರಡು ತಿಂಗಳ ಹಿಂದೆ ಮಾರುಕಟ್ಟೆಗೆ ದಿನಕ್ಕೆ 60 ರಿಂದ 70 ಸಾವಿರ ಬಾಕ್ಸ್ ಟೊಮೇಟೊ ಬರುತ್ತಿದ್ದು, ಭಾನುವಾರ 1,18,974 ಬಾಕ್ಸ್ ಟೊಮೇಟೊ ಬಂದಿದೆ. ಪ್ರತಿ ಕ್ರೇಟ್ಗೆ 100-240 ರೂ.ಗೆ ಮಾರಾಟವಾಗಿದೆ ಎಂದರು.
ಶ್ರೀನಿವಾಸಪುರದ ಯುವ ರೈತ ಸುದರ್ಶನ್ ಮಾತನಾಡಿ, ಮಳೆ ಕೊರತೆ ಹಾಗೂ ಬಿಸಿಲಿನ ಬೇಗೆಯಿಂದ ಟೊಮೇಟೊ ನಾಲ್ಕೈದು ದಿನವೂ ಬಾಳಿಕೆ ಬರುವುದಿಲ್ಲ ಮತ್ತು ವ್ಯಾಪಾರಸ್ಥರು ಆಸಕ್ತಿ ತೋರುತ್ತಿಲ್ಲ. ಆದರೆ, ಉತ್ತಮ ಮಳೆಯಿಂದಾಗಿ ಸುಮಾರು ಒಂದು ವಾರದಿಂದ ಟೊಮೇಟೊ ಬೆಳೆಗಳು ಕೈಗೆ ಬರುತ್ತಿವೆ. ಇದೂ ಕೂಡ ಬೆಲೆ ಕುಸಿತಕ್ಕೆ ಒಂದು ಕಾರಣ ಎಂದು ತಿಳಿಸಿದರು.
ಇದನ್ನೂ ಓದಿ: ಟೊಮೆಟೊ ಬಳಿಕ ಇದೀಗ ಈರುಳ್ಳಿ ಸರದಿ: ಗ್ರಾಹಕರ ಕಣ್ಣಲ್ಲಿ ನೀರು ತರಿಸುವ ಸಾಧ್ಯತೆ?
ಮತ್ತೋರ್ವ ರೈತ ಮುರಳಿ ಮಾತನಾಡಿ, ಗರಿಷ್ಠ ಬೆಲೆ ಇರುವ ಸಂದರ್ಭದಲ್ಲಿ ಬಹುತೇಕ ರೈತರ ಟೊಮೇಟೊ ಬೆಳೆಗೆ ಎಲೆ ಸುರುಳಿ ರೋಗ ಹಾಗೂ ಬಿಳಿ ನೊಣ ರೋಗ ಬಾಧಿಸಿದ್ದು, ಶೇ 50ರಷ್ಟು ಬೆಳೆ ಹಾನಿಯಾಗಿದ್ದರಿಂದ ಪ್ರಯೋಜನವಾಗಿಲ್ಲ ಎಂದರು.