
ಬೆಂಗಳೂರು: ಒಂದು ವರ್ಷಕ್ಕೂ ಹೆಚ್ಚು ಕಾಲ ಮೂಳೆ ಕ್ಯಾನ್ಸರ್ ವಿರುದ್ಧ ಹೋರಾಡಿದ ಬೆಂಗಳೂರಿನ ಚಿರಂತನ್ ಹೊನ್ನಾಪುರ ಐಸಿಎಸ್ಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 92 ಅಂಕ ಗಳಿಸಿದ್ದಾರೆ.
ನಾಗರಭಾವಿಯ ಆರ್ಯನ್ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಯಾಗಿದ್ದ ಚಿರಂತನ್ 9 ನೇ ತರಗತಿಯಲ್ಲಿದ್ದಾಗ, ಹದಿಹರೆಯದ ಮಕ್ಕಳು ಹಾಗೂ ಯುವಕ ಯುವತಿಯರಲ್ಲಿ ಹೆಚ್ಚಾಗಿ ಕಂಡು ಬರುವ ಹೈ-ಗ್ರೇಡ್ ಆಸ್ಟಿಯೋಸಾರ್ಕೋಮಾ ಎಂಬ ಮೂಳೆಯ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೀಗಾಗಿ ಈತನಿಗೆ 9ನೇ ತರಗತಿಯಲ್ಲಿ ಇದ್ದಾಗಲೇ ಆಕ್ಟೋಬರ್ ತಿಂಗಳಿನಿಂದ ಚಿಕಿತ್ಸೆ ಆರಂಭಿಸಲಾಗಿತ್ತು.
ಆಗಿನಿಂದಲೂ ಚಿರಂತನ್ ಗೆ ತರಗತಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಚಿಕಿತ್ಸೆಯ ಭಾಗವಾಗಿ 9ನೇ ತರಗತಿಯಲ್ಲಿ ಇದ್ದಾಗಲೇ ಆತನ ಬಲಕೈನ ಮೂಳೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು ಹಾಕಲಾಗಿತ್ತು.
ನಂತರ ಆತ ಬೇರೋಬ್ಬರ ಸಹಾಯದಿಂದ 9ನೇ ತರಗತಿ ಪರೀಕ್ಷೆ ಬರೆದಿದ್ದ. ಅಲ್ಲದೇ ಶೇಕಡಾ 82 ಅಂಕಗಳೊಂದಿಗೆ ಆತ 9ನೇ ತರಗತಿ ಪಾಸು ಮಾಡಿದ್ದ.
ಚಿಕಿತ್ಸೆಯ ಕಾರಣದಿಂದಾಗಿ ಸುಮಾರು ಮೂರು ತಿಂಗಳ ಕಾಲ ಚಿರಂತನ್ 10 ನೇ ತರಗತಿಗೆ ವಿಶೇಷ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೂ, ಯಾವುದೇ ಖಾಸಗಿ ಬೋಧನೆ ಪಡೆಯಲಿಲ್ಲ. ಶಾಲಾ ಪಾಠಗಳು, ಶಿಕ್ಷಕರ ಮಾರ್ಗದರ್ಶನ ಮತ್ತು ಆನ್ಲೈನ್ ಸಂಪನ್ಮೂಲಗಳನ್ನು ಮಾತ್ರ ಅವಲಂಬಿಸಿದ್ದರು, ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಬರುವ ಚಾನೆಲ್ಗಳಲ್ಲಿ ವಿವಿಧ ಪಠ್ಯ ವಿಷಯಗಳ ಕುರಿತು ಲೈವ್ ತರಗತಿಗಳಿಗೆ ಹಾಜರಾಗುತ್ತಿದ್ದರು ಮತ್ತು ಅಲ್ಲಿ ನೀಡಿದ ಸಲಹೆಗಳನ್ನು ಪಾಲಿಸುತ್ತಿದ್ದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ನಾನು ಕಾನೂನು ಅಧ್ಯಯನ ಮಾಡಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಬಯಸುತ್ತೇನೆ. ಐಪಿಎಸ್ ಅಧಿಕಾರಿಯಾಗುವುದು ನನ್ನ ಕನಸು. ಅದಕ್ಕಾಗಿಯೇ ನಾನು ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಚಿರಂತನ್ ತಿಳಿಸಿದ್ದಾರೆ.
Advertisement