ಆದರ್ಶ ಜೀವನಶೈಲಿ: ಆಯುರ್ವೇದದ ರೀತ್ಯಾ

ಚರಕ ಮಹರ್ಷಿಗಳು ಒಮ್ಮೆ ಚರಕ ಪಕ್ಷಿಯನ್ನು ಪ್ರಶ್ನೆ ಮಾಡುತ್ತಾರೆ “ಕೋ„ರುಕ್?”, ಅಂದರೇ “ಯಾರು ನಿರೋಗಿಯು?” ಎಂದು. ಆಗ ಚರಕ ಪಕ್ಷಿಯು “ಹಿತಭುಕ್, ಮಿತಭುಕ್, ಋತುಭುಕ್” ಎಂದು ಉತ್ತರಿಸುತ್ತದೆ.
ಆಯುರ್ವೇದ (ಸಂಗ್ರಹ ಚಿತ್ರ)
ಆಯುರ್ವೇದ (ಸಂಗ್ರಹ ಚಿತ್ರ)

ಚರಕ ಮಹರ್ಷಿಗಳು ಒಮ್ಮೆ ಚರಕ ಪಕ್ಷಿಯನ್ನು ಪ್ರಶ್ನೆ ಮಾಡುತ್ತಾರೆ “ಕೋ„ರುಕ್?”, ಅಂದರೇ “ಯಾರು ನಿರೋಗಿಯು?” ಎಂದು. ಆಗ ಚರಕ ಪಕ್ಷಿಯು “ಹಿತಭುಕ್, ಮಿತಭುಕ್, ಋತುಭುಕ್” ಎಂದು ಉತ್ತರಿಸುತ್ತದೆ. ಯಾವ ವ್ಯಕ್ತಿಯು “ಹಿತಕರವಾದ ಪದಾರ್ಥಗಳನ್ನು ತಿನ್ನುತ್ತಾನೊ, ಮಿತವಾಗಿ ಆಹಾರ ಸೇವನೆ ಮಾಡುತ್ತಾನೊ, ಕಾಲ ಹಾಗು ಸಮಯಕ್ಕೆ ಅನುಸಾರವಾಗಿ ಭೋಜನ ಮಾಡುತ್ತಾನೊ” ಆ ವ್ಯಾಕ್ತಿಯು ನಿರೋಗಿಯು. ಈ ಮೂರು ನಿಯಮಗಳನ್ನು ಪಾಲಿಸದ ಪ್ರಾಣಿಗೆ ರೋಗವು ಉತ್ಪತ್ತಿ ಆಗುವುದು. ಮನುಷ್ಯನಿಗೆ ಸ್ವಸ್ಥ ಶರೀರವಿದ್ದರೆ ಮಾತ್ರ ಮನಸ್ಸು ಉಲ್ಲಾಸಕರವಾಗಿರುತ್ತದೆ. ಆದ್ದರಿಂದ ಪ್ರಸ್ತುತ ಸಮಯದಲ್ಲಿ ಪ್ರತಿಯೊಂದು ಪ್ರಾಣಿಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಾಮಥ್ರ್ಯವಿರುವ ಶರೀರವಿರಬೇಕ್ಕಾದ್ದು ಅತ್ಯವಶ್ಯಕ.

ಆಯುರ್ವೇದದ ಸೂತ್ರದಂತೆ ನಾವು ಆರೋಗ್ಯವಾಗಿರಬೇಕಾದಲ್ಲಿ ನಮ್ಮ ಜೀವನಶೈಲಿಯು ದಿನಚರ್ಯ ಹಾಗು ಋತುಚರ್ಯ, ಸದ್‍ವೃತ್ತಿ ಎಂಬ ತತ್ತ್ವಗಳನ್ನು ಪರಿಪಾಲಿಸ ಬೇಕಾಗುವುದು. ದಿನಚರ್ಯ ನಮ್ಮ ಶರೀರ ಮತ್ತು ಮನಸ್ಸನ್ನು ಆರೋಗ್ಯವಾಗಿರಿಸಲು ಸಹಾಯ ಮಾಡಿದರೆ, ಸದ್‍ವೃತ್ತಿಯು ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಜನರು ನಮ್ಮೊಂದಿಗೆ ಆರೋಗ್ಯಕರವಾದ ರೀತಿಯಲ್ಲಿ ವ್ಯವಹರಿಸಲು ಸಹಾಯ ಮಾಡುತ್ತದೆ.

ಆಯುರ್ವೇದದ ಪ್ರಕಾರ ದಿನಚರ್ಯ ಎಂದರೇ ನಾವು ಪ್ರತಿದಿನವೂ ಕೈಗೊಳ್ಳುವ ಕಾರ್ಯಗಳಾಗಿರುತ್ತದೆ. ಆಯುರ್ವೇದದ ಪ್ರಕಾರ ದಿನಚರ್ಯೆಯು- ಬ್ರಹ್ಮ ಮುಹೂರ್ತ ಉತ್ಥಾನ, ಆಚಮನ, ದಂತದಾವನ, ಜಿಹ್ವಾ ನಿರ್ಲೇಖನ, ನಾಸ್ಯ, ಅಂಜನ, ಅಭ್ಯಂಗ, ವ್ಯಾಯಾಮ, ಸ್ನಾನ, ವಸ್ತ್ರ ಧಾವನ ಎಂಬ ಅಂಶಗಳನ್ನು ಒಳಗೊಂಡಿದೆ. ಯಾವ ಮನುಷ್ಯನು ಸೂರ್ಯೋದಯಕ್ಕೆ ಮುನ್ನ ನಿದ್ದೆಯಿಂದೆದ್ದು ಮಲಾದಿಗಳನ್ನು ವಿಸರ್ಜಿಸಿ, ಹಲ್ಲುಗಳನ್ನು ಮತ್ತು ನಾಲಿಗೆಯನ್ನು ಚೆನ್ನಾಗಿ ಉಜ್ಜಿ ಬಾಯನ್ನು ತೊಳೆದು ದೇಹಕ್ಕೆ ವ್ಯಾಯಾಮ ನೀಡಿದ ನಂತರ ಶುಭ್ರವಾಗಿ ಸ್ನಾನ ಮಾಡುವುದು ಮತ್ತು ತನ್ನ ದೈನಂದಿನ ಕೆಲಸಗಳ ಕಡೆಗೆ ಕಾರ್ಯೋನ್ಮುಖನಾಗಿ, ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಪರಿಪಾಠವಿರಿಸಿಕೊಳ್ಳುವುದು ಅತ್ಯುತ್ತಮವಾದ ದಿನಚರ್ಯೆಯಾಗಿದ್ದು, ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೂಲ ಹೇತುವಾಗಿದೆ.

ಸದ್‍ವೃತ್ತಿ ಎಂದರೆ ನಮ್ಮ ಸುತ್ತಮುತ್ತಲಿನ ಪರಿಸರ, ಸಮಾಜ ಮತ್ತು ಜನರೊಂದಿಗೆ ಸಾಮರಸ್ಯದಿಂದಿರಲು ಅಗತ್ಯವಾದಚಾರ ಮತ್ತು ನಡವಳಿಕೆ ಆಗಿರುತ್ತದೆ. ಸದ್‍ವೃತ್ತಿಯಲ್ಲಿ- ಮಧುರ ಭಾಷಣ, ಇಂದ್ರಿಯ ವ್ಯವಹಾರ, ಗಮನ ವಿಧಿ, ಧರ್ಮ ಆಚರಣ, ಶರೀರ ಚೇಷ್ಟಾ ವಿಧಿ, ಆಚಾರ ರಸಾಯನ ಎಂಬ ಅಂಶಗಳನ್ನು ಒಳಗೊಂಡಿದೆ. ಸಮಾಜದಲ್ಲಿ ಮನುಷ್ಯನಾದವನು ಮತ್ತೊಬ್ಬರೊಂದಿಗೆ ಮಾತನಾಡುವಾಗ ಪ್ರಿಯವಾಗಿ ಮಾತನಾಡಬೇಕು, ಅಹಿತಕರವಾಗಿ ಯಾರೊಂದಿಗೂ ವ್ಯವಹರಿಸಬಾರದು, ತನ್ನದಲ್ಲದ ವಸ್ತುವಿಗೆ ಆಸೆ ಪಡಬಾರದು, ಕಾಯಾ, ವಾಚಾ, ಮನಸಾ ಒಪ್ಪುವ ರೀತಿಯಲ್ಲಿ ನಡೆದುಕೊಳ್ಳುವುದರಿಂದ ತನ್ನ ಬುದ್ದಿ ಹಾಗು ಮನಸ್ಸಿನ ಸ್ವಾಸ್ಥ್ಯವನ್ನು ಮತ್ತು ಸಮಾಜದ ಸ್ವಸ್ಥತೆಯನ್ನು ಕಾಪಾಡಬಹುದಾಗಿದೆ.

ನಮ್ಮ ಆಯುರ್ವೇದಾಚಾರ್ಯರಾದ ಚರಕ, ಶುಸ್ರೂತ, ವಾಗ್ಬಟ, ಕಾಶ್ಯಪಾದಿಗಳು ಪೂರ್ವ ಕಾಲದಲ್ಲಿಯೇ ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವ ವಿಚಾರಗಳು ಪ್ರಸ್ತುತ ಸಂದರ್ಭದಲ್ಲಿ ಎಷ್ಟು ಪ್ರಾಶ್ಯಸ್ತ್ಯ ಪಡೆದಿದೆ ಮತ್ತು ಸೂಕ್ತವಾದುದು ಎಂಬುದು ತಿಳಿದು ಬರುತ್ತದೆ. ಪ್ರಪಂಚದಾದ್ಯಂತ ಕೊರೋನ (ಕೋವಿಡ್-19) ವೈರಾಣುವಿನಿಂದ ಜನರು ತಲ್ಲಣಿಸಿ, ತತ್ತರಿಸಿ ಹೋಗಿರುವುದು, ಅನೇಕರ ಪ್ರಾಣ ಹಾನಿಯಾಗಿರುವುದು ಸರಿಯಾದ ಶಿಸ್ತುಬದ್ಧ ಜೀವನಶೈಲಿ, ದಿನಚರ್ಯೆ ಇರದಿರುವುದರಿಂದ ಶರೀರದಲ್ಲಿನ ರೋಗನಿರೋಧಕ ಶಕ್ತಿಯು ಕಮ್ಮಿಯಾಗಿರುವುದೇ ಇದಕ್ಕೆ ಕಾರಣವಾಗಿದೆ. ಇದನ್ನು ಅಲೋಪತಿ ವೈದ್ಯರಾದಿಯಾಗಿ ಪ್ರಪಂಚದಾದ್ಯಂತ ಎಲ್ಲ ಶಾಖೆಯ ವೈದ್ಯರು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ನಮ್ಮ ಶರೀರ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನಮ್ಮ ಋಷಿ-ಮುನಿಗಳು ಹಾಗು ಪೂರ್ವಾಚಾರ್ಯರು ಹಾಕಿಕೊಟ್ಟಿರುವ ದಾರಿಯಲ್ಲಿ ನಡೆದು ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯದ ಜೊತೆಗೆ ನಮ್ಮ ಪರಿಸರವನ್ನೂ ಆರೋಗ್ಯವಾಗಿರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಈ ದಿಸೆಯಲ್ಲಿ ಶಾರದಾ ಪೀಠಂ ಶೃಂಗೇರಿ ಅವರು ಶ್ರೀ ಶಾರದಾ ಆಯುರ್ವೇದ ಚಿಕಿತ್ಸಾಲಯ (ಶ್ರೀ ಶಾರದಾ ಪೀಠಂ, ಶೃಂಗೇರಿಯವರ ಅಂಗಸಂಸ್ಥೆ, ನಿರ್ವಹಣೆ :- ಶ್ರೀ ಸಚ್ಚಿದಾನಂದ ಪ್ರತಿಷ್ಠಾನಂ) ಎಂಬ ಆಯುರ್ವೇದ ವಿಭಾಗವನ್ನು ಜನರ ಅನುಕೂಲಕ್ಕೆಂದು ಪ್ರಾರಂಭಿಸಿದೆ. ಇಲ್ಲಿನ ವೈದ್ಯರು ಹಾಗು ವೈದ್ಯಕೀಯ ಸಿಬ್ಬಂದಿಗಳು ಮನುಷ್ಯನ ಜೀವನಶೈಲಿ ಮತ್ತು ದಿನಚರಿಯನ್ನು ಸೂಕ್ತ ರೀತಿಯಲ್ಲಿ ಸರಿಪಡಿಸಿಕೊಳ್ಳಲು ವಿಧಿವಿಧಾನಗಳನ್ನು ರೂಪಿಸಿದ್ದಾರೆ. ಜನರು ತಮ್ಮ ದೇಹ ಪ್ರಕೃತಿಗೆ ತಕ್ಕಂತೆ ದಿನಚರಿಯನ್ನು ಮತ್ತು ಆಹಾರ ಪದ್ಧತಿಯನ್ನು ಪಾಲಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಪರಿಣಾಮಕಾರಿಯಾದ ಮಾರ್ಗವಾಗಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂಬುದು ನಮ್ಮ ಆಶಯ.

ಡಾ.ಸಾವಿತ್ರಿ ಎಸ್ ಸಿ

ಮುಖ್ಯಸ್ಥರು, ಎಮ್. ಡಿ (ಕಾಯ ಚಿಕಿತ್ಸಾ) ಆಯುರ್ವೇದ,

ಶ್ರೀ ಶಾರದಾ ಆಯುರ್ವೇದ ಚಿಕಿತ್ಸಾಲಯ (ಶ್ರೀ ಶಾರದಾ ಪೀಠಂ, ಶೃಂಗೇರಿಯವರ ಅಂಗಸಂಸ್ಥೆ, ನಿರ್ವಹಣೆ :- ಶ್ರೀ ಸಚ್ಚಿದಾನಂದ ಪ್ರತಿಷ್ಠಾನಂ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com