ಲಾಕ್ ಡೌನ್ ಮುಗಿದರೂ ಜನರಲ್ಲಿ ಕೊರೋನಾ ಆತಂಕ, ಭಯ; ಕಚೇರಿಗೆ ಬರಲು ಹಿಂದೇಟು: ಸಮೀಕ್ಷೆ

ಲಾಕ್ ಡೌನ್ ಸಡಿಲಿಕೆಯಾಗಿ ಜನರು ತಮ್ಮ ಎಂದಿನ ಚಟುವಟಿಕೆಗಳಿಗೆ ಮರಳುತ್ತಿರುವ ಸಮಯದಲ್ಲಿ ಶೇಕಡಾ 93ರಷ್ಟು ನೌಕರರು ಕಚೇರಿಗೆ ಬರಲು ಆತಂಕಗೊಂಡಿದ್ದಾರೆ, ಆರೋಗ್ಯ ವಿಚಾರದಲ್ಲಿ ಅವರಿಗೆ ತೀವ್ರ ಆತಂಕ, ಗೊಂದಲ, ಗಾಬರಿಯಾಗುತ್ತಿದೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ:ಲಾಕ್ ಡೌನ್ ಸಡಿಲಿಕೆಯಾಗಿ ಜನರು ತಮ್ಮ ಎಂದಿನ ಚಟುವಟಿಕೆಗಳಿಗೆ ಮರಳುತ್ತಿರುವ ಸಮಯದಲ್ಲಿ ಶೇಕಡಾ 93ರಷ್ಟು ನೌಕರರು ಕಚೇರಿಗೆ ಬರಲು ಆತಂಕಗೊಂಡಿದ್ದಾರೆ, ಆರೋಗ್ಯ ವಿಚಾರದಲ್ಲಿ ಅವರಿಗೆ ತೀವ್ರ ಆತಂಕ, ಗೊಂದಲ, ಗಾಬರಿಯಾಗುತ್ತಿದೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಶೇಕಡಾ 93ರಷ್ಟು ಮಂದಿಗೆ ಲಾಕ್ ಡೌನ್ ಮುಗಿದು ಮತ್ತೆ ಕಚೇರಿಗೆ ಬರಲು ಆತಂಕವಾಗುತ್ತಿದೆ, ಎಲ್ಲಿ ತಮ್ಮ ಆರೋಗ್ಯ ಕೆಟ್ಟು ಹೋಗಬಹುದು, ತಮಗೆ ಕೊರೋನಾ ಸೋಂಕು ತಗಲಬಹುದೇ ಎಂಬ ಆತಂಕದಲ್ಲಿ ಉದ್ಯೋಗಿಗಳಿದ್ದಾರೆ ಎಂದು ಹೆಲ್ತ್ ಟೆಕ್ ಕಮ್ಯುನಿಟಿ ಎಫ್ ವೈಐ ಮತ್ತು ಮೈಂಡ್ ಮ್ಯಾಪ್ ಅಡ್ವಾನ್ಸ್ ರಿಸರ್ಚ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸ್ ಬಿಲಿಟಿ(ಸಿಎಸ್ಆರ್) ನಂತೆ ಉದ್ಯೋಗಕ್ಕೆ ಹೋಗುವ ನೌಕರರು ಆರೋಗ್ಯ ವಿಚಾರದಲ್ಲಿ ತಮ್ಮ ಮಾಲೀಕರಿಂದ ಕಾರ್ಪೊರೇಟ್ ಆರೋಗ್ಯ ಜವಬ್ದಾರಿ(ಸಿಎಚ್ಆರ್)ನ್ನು ಕಡ್ಡಾಯಗೊಳಿಸಬೇಕೆಂದು ನಿರೀಕ್ಷಿಸುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಈ ಸಮೀಕ್ಷೆಯನ್ನು ಏಪ್ರಿಲ್ ಕೊನೆಯ ವಾರದಲ್ಲಿ ನಡೆಸಲಾಗಿದೆ. ದೆಹಲಿ-ಎನ್ ಸಿಆರ್ ಪ್ರದೇಶ, ಮುಂಬೈ, ಬೆಂಗಳೂರುಗಳಲಿ ಸಣ್ಣ, ಮಧ್ಯಮ ಮತ್ತು ಬೃಹತ್ ಉದ್ಯಮಗಳ ಸುಮಾರು 560 ನೌಕರರ ಮೇಲೆ ನಡೆಸಿದ ಸಮೀಕ್ಷೆಯಿಂದ ಇದು ತಿಳಿದುಬಂದಿದೆ.

ಸುಮಾರು ಶೇಕಡಾ 85ರಷ್ಟು ಜನರು ತಮ್ಮ ಉದ್ಯೋಗದಾತರು ಕಚೇರಿ ಸ್ಥಳವನ್ನು ಸ್ವಚ್ಛಗೊಳಿಸಬೇಕು, ಸುರಕ್ಷತಾ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ಕಾರ್ಯಗತಗೊಳಿಸಬೇಕು ಮತ್ತು ಅವರು ಕಚೇರಿಯಲ್ಲಿದ್ದಾಗ ಅವರ ಆರೋಗ್ಯವನ್ನು ರಕ್ಷಿಸಲು ಹೊಸ ಮತ್ತು ನವೀನ ಮಾರ್ಗಗಳನ್ನು ಹುಡುಕಬೇಕೆಂದು ಬಯಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ.

ಇನ್ನು ಲಾಕ್ ಡೌನ್ ಮುಗಿದ ಮೇಲೆ ಸುಮಾರು ಶೇಕಡಾ 81ರಷ್ಟು ನೌಕರರು ಬ್ಯಾಚ್, ಬ್ಯಾಚ್ ಆಗಿ ಕೆಲಸವನ್ನು ಆರಂಭಿಸಿ ಎಂದು ಕೇಳಿಕೊಂಡರೆ ಶೇಕಡಾ 73 ರಷ್ಟು ಉದ್ಯೋಗಸ್ಥರು ಮನೆಯಿಂದಲೇ ಕೆಲಸವನ್ನು ಮಾಡುವ ವ್ಯವಸ್ಥೆ ನೀಡಬೇಕೆಂದು ಕೇಳುತ್ತಿದ್ದಾರೆ.

ಕೋವಿಡ್-19 ಭಾರತದ ಎಲ್ಲ ವೃತ್ತಿಪರರನ್ನು ಹಲವಾರು ವಿಷಯಗಳಲ್ಲಿ ಆತಂಕಗೊಳಿಸಿದರೆ ಶೇಕಡಾ 59ರಷ್ಟು ಮಂದಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಶೇ.25 ರಷ್ಟು ಜನರು ತಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆತಂಕದಲ್ಲಿದ್ದರೆ, ಶೇಕಡಾ 16ರಷ್ಟು ಜನರು ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಕ್ಕಟ್ಟು ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದ ಮತ್ತು ಈ ಅನಿಶ್ಚಿತತೆಯು ಹೆಚ್ಚಿನ ಆತಂಕಕ್ಕೆ ಕಾರಣವಾಗುತ್ತದೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com