ಕಾಶ್ಮೀರವನ್ನು ಬಯಲು ಕಾರಾಗೃಹವಾಗಲು ಬಿಡುವುದಿಲ್ಲ: ಕೇಂದ್ರದ ವಿರುದ್ಧ ಮತ್ತೆ ಅಬ್ಬರಿಸಿದ ಮೆಹಬೂಬಾ ಮುಫ್ತಿ

ಯಾವುದೇ ಕಾರಣಕ್ಕೂ ಜಮ್ಮು ಮತ್ತು ಕಾಶ್ಮೀರವನ್ನು ಬಯಲು ಕಾರಾಗೃಹವಾಗಲು ಬಿಡುವುದಿಲ್ಲ ಎಂದು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಯಾವುದೇ ಕಾರಣಕ್ಕೂ ಜಮ್ಮು ಮತ್ತು ಕಾಶ್ಮೀರವನ್ನು ಬಯಲು ಕಾರಾಗೃಹವಾಗಲು ಬಿಡುವುದಿಲ್ಲ ಎಂದು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಪುಲ್ವಾಮ ಉಗ್ರ ದಾಳಿ ಬಳಿಕ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವಾರದಲ್ಲಿ 2 ದಿನ ಹೆದ್ದಾರಿಯಲ್ಲಿ ನಾಗರಿಕ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಾರಿಮಾಡಲಾಗಿದ್ದ ನಿಯಮ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ಸೇನೆ ಮತ್ತು ಸರ್ಕಾರದ ಈ ನಡೆಯನ್ನು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಟೀಕಿಸಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ನಿಜಕ್ಕೂ ಇದು ಸರಿಯಾದ ನಡೆಯಲ್ಲ. ಕಾಶ್ಮೀರಿಗಳ ಮೂಲಭೂತ ಹಕ್ಕುಗಳನ್ನು ಈ ರೀತಿಯ ನೆಪವೊಡ್ಡಿ ತಡೆ ಹಿಡಿಯಲಾಗದು. ಇದು ನಮ್ಮ ರಾಜ್ಯ, ನಮ್ಮ ನೆಲ.. ನಮ್ಮ ರಸ್ತೆಗಳನ್ನು ಬಳಕೆ ಮಾಡಲೂ ಕೂಡ ನಾವು ಅನುಮತಿ ಪಡೆಯಬೇಕೆ..? ಎಂದು ಕಿಡಿಕಾರಿದ್ದಾರೆ.
ಅಂತೆಯೇ ಯಾವುದೇ ಕಾರಣಕ್ಕೂ ಕಾಶ್ಮೀರವನ್ನು ಬಯಲು ಕಾರಾಗೃಹವಾಗಲು ಬಿಡುವುದಿಲ್ಲ. ಇದು ಕಾಶ್ಮೀರ. ಪಾಲೆಸ್ತೀನ್​ ಅಲ್ಲ. ನಮ್ಮ ಪ್ರೀತಿಯ ಹಾಗೂ ಹೆಮ್ಮೆಯ ನಾಡನ್ನು ಬಯಲು ಸೆರೆಮನೆಯನ್ನಾಗಿ ಮಾಡಲು ಅವಕಾಶ ನೀಡುವುದಿಲ್ಲ. ತಮ್ಮ ದೈನಂದಿನ ಸಂಚಾರಕ್ಕಾಗಿ ರಸ್ತೆ ಬಳಸುವ ಜನರ ಸಾಮಾನ್ಯ ಹಕ್ಕನ್ನು ಕೂಡ ಕಸಿದುಕೊಳ್ಳಲು ಸರ್ಕಾರ ಹುನ್ನಾರ ನಡೆಸಿದಂತಿದೆ. ಜನರ ಸಂಕಷ್ಟವನ್ನು ಅರಿತುಕೊಂಡು ವಿವೇಚನಾರಹಿತವಾದ ಈ ಆದೇಶವನ್ನು ಸರ್ಕಾರ ಶೀರ್ಘವಾಗಿ ಹಿಂಪಡೆಯುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com