ನವದೆಹಲಿ: ರಾಫೆಲ್ ಫೈಟರ್ ಜೆಟ್ ವಿವಾದದ ಕೇಂದ್ರಬಿಂದುವಾಗಿದ್ದರೆ, ಅದೇ ರಾಫೆಲ್ ಈ ಗ್ರಾಮದ ಹೆಸರಾಗಿದೆ.
ಛತ್ತೀಸ್ಘಡ್ ನಲ್ಲಿ ರಾಫೆಲ್ ಹೆಸರಿನ ಗ್ರಾಮವೊಂದಿದ್ದು, ಮಹಸಮುಂದ್ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮವಾಗಿದೆ. ಏ.18 ರಂದು ಲೋಕಸಭೆಗೆ ಇಲ್ಲಿ ಮತದಾನ ನಡೆಯಲಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು(ರಾಫೆಲ್ ಗ್ರಾಮದವರು) ತನಿಖೆಗೊಳಪಡಬೇಕಾಗುತ್ತದೆ ಬೇರೆ ಗ್ರಾಮದವರು ನಮ್ಮನ್ನು ಹಾಸ್ಯ ಮಾಡುತ್ತಾರೆ. ರಾಫೆಲ್ ಹೆಸರು ವಿವಾದಲ್ಲಿ ಸಿಲುಕಿಕೊಳ್ಳುತ್ತಿದ್ದಂತೆಯೇ ಗ್ರಾಮದ ಹೆಸರನ್ನು ಬದಲಾವಣೆ ಮಾಡಲು ಮುಖ್ಯಮಂತ್ರಿಗಳಿಗೂ ಮನವಿ ಮಾಡಲು ಯತ್ನಿಸಿದ್ದೆವು ಆದರೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಗ್ರಾಮಸ್ಥ ಧರ್ಮ್ ಸಿಂಗ್ ಹೇಳಿದ್ದಾರೆ.
ನಮ್ಮ ಗ್ರಾಮದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಗ್ರಾಮದ ಹೆಸರಷ್ಟೇ ಆಕರ್ಷಣೀಯವಾಗಿದೆ. ರಾಜ್ಯದ ಹೊರಭಾಗದಲ್ಲಿ ನಮ್ಮ ಗ್ರಾಮದ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಗ್ರಾಮದಲ್ಲಿ ಕುಡಿಯುವ ನೀರು, ನೈರ್ಮಲ್ಯ ಸೇರಿದಂತೆ ಮೂಲಸೌಕರ್ಯದ ಕೊರತೆ ಉಂಟಾಗಿದೆ. ಇಲ್ಲಿನ ಕೃಷಿಕರು ಮಳೆಯ ಮೇಲೆಯೇ ಅವಲಂಬಿತರಾಗಿದ್ದು, ನೀರಾವರಿ ಸೌಲಭ್ಯಗಳಿಲ್ಲ. ಇನ್ನು ರಾಜಕಾರಣಿಗಳು ಗ್ರಾಮವನ್ನು ದತ್ತುಪಡೆಯುತ್ತಾರಾದರೂ ಯಾರೂ ಭೇಟಿ ನೀಡುವುದಿಲ್ಲ.
"ಯಾರೇ ಅಧಿಕಾರಕ್ಕೆ ಬಂದರೂ ಗ್ರಾಮದ ಹೆಸರನ್ನು ಮೊದಲು ಬದಲಾವಣೆ ಮಾಡಿ" ಎಂಬುದು ಗ್ರಾಮಸ್ಥರ ಮನವಿಯಾಗಿದೆ.