ಅಜಂಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ
ಉತ್ತರ ಪ್ರದೇಶದಲ್ಲಿ ಅನೇಕ ಅಕ್ರಮ ಭೂ ಸ್ವಾಧೀನ, ನೋಂದಣಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
ಲಖನೌ: ಉತ್ತರ ಪ್ರದೇಶದಲ್ಲಿ ಅನೇಕ ಅಕ್ರಮ ಭೂ ಸ್ವಾಧೀನ, ನೋಂದಣಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
ಅಜಂಖಾನ್ ವಿರುದ್ಧದ ಕನಿಷ್ಠ 26 ಪೊಲೀಸ್ ಎಫ್ಐಆರ್ಗಳನ್ನು ಸ್ವಂ ಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ, ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್ ) ದಾಖಲಿಸಿದೆ. ಇದು ಪೊಲೀಸ್ ಎಫ್ ಐಐರ್ ಗೆ ಸಮಾನವಾದದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ರಮ ಭೂ ಸ್ವಾಧೀನ, ಹಸ್ತಾಂತರ, ನೋಂದಣಿ ಆರೋಪ ಕೇಳಿಬಂದಿರುವ ಅಜಂಖಾನ್ ಹಾಗೂ ಮತ್ತಿತರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ ನಡಿ ಪ್ರಕರಣ ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಅಜಂಖಾನ್ ಹಾಗೂ ಇತರ ವಿರುದ್ಧದ ಆಸ್ತಿಪಾಸ್ತಿ ಸಂಬಂಧ ಕೇಳಿಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು, ಒಂದು ವೇಳೆ ಅಕ್ರಮ ಎಂಬುದು ಕಂಡುಬಂದರೆ ಆಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಅವರ ಆಸ್ತಿಪಾಸ್ತಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಮೊಹಮ್ಮದ್ ಆಲಿ ಜವಹರ್ ವಿವಿಯ ಸಂಸ್ಥಾಪಕ ಹಾಗೂ ಕುಲಪತಿ ಆಗಿರುವ ಉತ್ತರ ಪ್ರದೇಶದ ಮಾಜಿ ಸಚಿವರ ವಿರುದ್ಧ ಬಲವಂತದ ಭೂ ಸ್ವಾಧೀನ ಆರೋಪಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಲಾಗಿದೆ.
ಅಜಂಖಾನ್ ಹಾಗೂ ವಿವಿಗೆ ಕೆಟ್ಟ ಹೆಸರು ತರುವಂತಹ ನಿಟ್ಟಿನಲ್ಲಿ ರಾಮ್ ಪುರ ಜಿಲ್ಲಾಧಿಕಾರಿಯಿಂದ ಕುತಂತ್ರ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಭೂ ಮಾಪಿಯಾಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಇತ್ತೀಚಿಗೆ ಬಿಡುಗಡೆ ಮಾಡಿರುವ ಆನ್ ಲೈನ್ ಪಟ್ಟಿಯಲ್ಲಿ ರಾಮ್ ಪುರದ ಸಂಸದರ ಹೆಸರನ್ನು ಕೂಡಾ ಹಾಕಲಾಗಿದೆ.