ಲಕ್ನೊ: ಅಪ್ರಾಪ್ತ ಬಾಲಕಿ ಮೇಲೆ ಉನ್ನಾವೊದಲ್ಲಿ ಅತ್ಯಾಚಾರವೆಸಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ ಕುಲ್ ದೀಪ್ ಸಿಂಗ್ ಸೆಂಗರ್ ಅವರಿಗೆ ಸಂಬಂಧಿಸಿದ ಕನಿಷ್ಠ 17 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಸಿಬಿಐ ಅಧಿಕಾರಿಗಳ ತಂಡ ನಿನ್ನೆ ಸೀತಾಪುರದಲ್ಲಿ ಸೆಂಗರ್ ಅವರನ್ನು ಬಂಧಿಸಿಟ್ಟಿದ್ದ ಜೈಲಿಗೆ ಹೋಗಿ ಅವರನ್ನು ಭೇಟಿ ಮಾಡಲು ಬಂದವರ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಉತ್ತರ ಪ್ರದೇಶದ ನಾಲ್ಕು ಜಿಲ್ಲೆಗಳಾದ ಲಕ್ನೊ, ಉನ್ನಾವೊ, ಬಂದಾ ಮತ್ತು ಫತೇಪುರಗಳಲ್ಲಿ ಶೋಧಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ ಆರೋಪಿಗೆ ಸೇರಿದ ಕೆಲವು ಸ್ಥಳಗಳ ಮೇಲೆ ಕೂಡ ತನಿಖೆ ನಡೆಸುತ್ತಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ನಿಗದಿತ ಸಮಯದೊಳಗೆ ತನಿಖೆಯನ್ನು ಪೂರ್ಣಗೊಳಿಸಲು ಉತ್ತರ ಪ್ರದೇಶದಲ್ಲಿ ಅನೇಕ ಕಡೆ ಸಿಬಿಐ ಒಟ್ಟಿಗೆ ದಾಳಿ ಮಾಡಿ ತೀವ್ರ ಪ್ರಮಾಣದಲ್ಲಿ ತನಿಖೆ ನಡೆಸಿದೆ.
ಈ ಮಧ್ಯೆ ಅಪಘಾತಕ್ಕೀಡಾದ ಉನ್ನಾವೊ ರೇಪ್ ಸಂತ್ರಸ್ತೆಯ ಆರೋಗ್ಯ ಹದಗೆಟ್ಟಿತ್ತು ಆಕೆಯ ಪರ ವಕೀಲರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ರಾಯ್ ಬರೇಲಿಯಲ್ಲಿ ನಡೆದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಸೆಂಗರ್ ನನ್ನು ಸೀತಾಪುರ ಜೈಲಿನಲ್ಲಿ ಸಿಬಿಐ ಅಧಿಕಾರಿಗಳ ತಂಡ ತನಿಖೆ ನಡೆಸಿದೆ. ಈ ಸಂದರ್ಭದಲ್ಲಿ ಜೈಲಿನ ಎಲ್ಲಾ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ನಿನ್ನೆ ತಡರಾತ್ರಿಯವರೆಗೆ ವಿಚಾರಣೆ ಮುಂದುವರಿದಿತ್ತು.