ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿರಾಧಿತ್ಯ ಸಿಂಧ್ಯಾ ಅಥವಾ ಸಚಿನ್ ಪೈಲಟ್ ನೇಮಿಸಿ: 'ಕೈ' ನಾಯಕರ ಒತ್ತಡ

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯುವ ನಾಯಕರಿಗೆ ನೀಡಬೇಕೆಂಬ ಒತ್ತಡ ಪಕ್ಷದ ಹಿರಿಯ ನಾಯಕರಲ್ಲಿ ದಿನೆ ದಿನೇ ಹೆಚ್ಚಾಗುತ್ತಿದೆ...
ಮಿಲಿಂದ್ ದಿಯೋರಾ
ಮಿಲಿಂದ್ ದಿಯೋರಾ
ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯುವ ನಾಯಕರಿಗೆ ನೀಡಬೇಕೆಂಬ ಒತ್ತಡ ಪಕ್ಷದ ಹಿರಿಯ ನಾಯಕರಲ್ಲಿ ದಿನೆ ದಿನೇ  ಹೆಚ್ಚಾಗುತ್ತಿದೆ. 
ಪಕ್ಷದ ಸಾರಥ್ಯವನ್ನು ಯುವನಾಯಕರಾದ ಸಚಿನ್ ಪೈಲೆಟ್ ಅಥವಾ ಜ್ಯೋತಿರಾದಿತ್ಯ ಸಿಂಧ್ಯ ಅವರಿಗೆ ವಹಿಸಿಕೊಡುವುದು ಸೂಕ್ತ ಎಂದು ಕಾಂಗ್ರೆಸ್ ಮುಖಂಡ ಮಿಲಿಂದ್ ದಿಯೋರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಈ ಇಬ್ಬರು ಯುವಕರಾಗಿದ್ದು, ಪಕ್ಷದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಲಿದ್ದಾರೆ ಎಂಬ ಅಭಿಲಾಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ತಿರುವನಂತಪುರದ ಸಂಸದ ಶಶಿ ತರೂರ್ ಸಹ ಯುವಕರಿಗೆ ಪಕ್ಷದ ಸಾರಥ್ಯ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅದರಲ್ಲೂ ವಿಶೇಷವಾಗಿ ಸಿಂಗ್ ಮತ್ತು ತರೂರ್ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಈ ಹುದ್ದೆಯನ್ನು ಅಲಂಕರಿಸುವುದು ಸೂಕ್ತ. ಇದರಿಂದ ಪಕ್ಷಕ್ಕೆ ಹೆಚ್ಚಿನ ಮೌಲ್ಯ ಬರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. 
ಆದರೆ ಪಕ್ಷದ ಹುದ್ದೆಗೆ ನಾನು ಆಕಾಂಕ್ಷಿಯಲ್ಲ , ಅದರ ಬಗ್ಗೆ ನನಗೆ ಆಸಕ್ತಿಯೂ ಇಲ್ಲ, ಬೇರೆ ಸಮರ್ಥ ನಾಯಕರನ್ನು ಹುಡುಕಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಪ್ರಿಯಾಂಕಾ ವಾದ್ರಾ ಪಕ್ಷದ ನಾಯಕರ ಕೋರಿಕೆಯನ್ನು ನಯವಾಗಿಯೇ ತಿರಸ್ಕರಿಸಿದ್ದರು.
ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಹೊಣೆ ಹೊತ್ತು  ಪಕ್ಷದ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ್ದು, ಇದನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ.
‘ನೀವೇ ಏಕೆ ಪಕ್ಷದ ಅಧ್ಯಕ್ಷರಾಗಬಾರದು ?’ ಎಂಬ ಪ್ರಶ್ನೆಗೆ ಉತ್ತರಿಸಿದ ಮಿಲಿಂದಾ ದಿಯೋರಾ ಅವರು, “ನನಗೆ ನನ್ನ ಶಕ್ತಿ ಸಾಮರ್ಥ್ಯದ ಅರಿವಿದೆ. ಯಾರೇ ಅಧ್ಯಕ್ಷರಾದರು ಅವರ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ. 
ಇದೇ 10 ರಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ನಂತರ  ಹೊಸ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ , ಸುಶೀಲ್ ಕುಮಾರ್  ಶಿಂದೆ , ಗುಲಾಂನಬಿ ಅಜಾದ್  ಅವರ ಹೆಸರು ಈ ಮೊದಲು ಕೇಳಿ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com