ನವದೆಹಲಿ: ನಾಟಕೀಯ ಬೆಳವಣಿಗೆ ಮತ್ತು ಹಲವು ಅನಿಶ್ಚಿತತೆಗಳ ನಡುವೆ ಶನಿವಾರ ಜರುಗಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆ ಪಕ್ಷದ ಹೊಸ ಅಧ್ಯಕ್ಷರ ಆಯ್ಕೆಗಾಗಿ ಕಸರತ್ತು ನಡೆಸಿದೆ. ಇದಕ್ಕಾಗಿ ಆಯ್ಕೆ ಸಮಿತಿ ರಚಸಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಇಂದು ರಾತ್ರಿಯೇ ಹೊಸ ಸಾರಥಿ ಹೆಸರು ಪ್ರಕಟವಾಗಲಿದೆ.
ಈ ಆಯ್ಕೆ ಸಮಿತಿ ಮುಖ್ಯಮಂತ್ರಿಗಳು, ರಾಜ್ಯ ಪಿಸಿಸಿ ಮುಖ್ಯಸ್ಥರು, ಶಾಸಕಾಂಗ ಪಕ್ಷದ ಮುಖಂಡರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರ ಪ್ರಮುಖ ಕಾರ್ಯಕರ್ತರ ಜೊತೆ ಸಮಾಲೋಚಿಸಿ ಅದು ಇಂದು ರಾತ್ರಿ ಮತ್ತೆ ಸಭೆ ಸೇರಿ ಹೊಸ ಅಧ್ಯಕ್ಷರ ಆಯ್ಕೆಗೆ ಅನುವು ಮಾಡಿಕೊಡಲಿದೆ.
ಸಿಡಬ್ಲ್ಯುಸಿ ಸಭೆಯ ಬಳಿಕ ಸುದ್ದಿಗರರ ಜೊತೆ ಮತನಾಡಿದ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಸಭೆ ಮುಗಿದಿದೆ. ಮತ್ತೆ ನಾವು ರಾತ್ರಿ ಸಭೆ ಸೇರಿ ನಂತರ ಹೊಸ ಅಧ್ಯಕ್ಷರ ಹೆಸರು ಪ್ರಕಟಿಸುವುದಾಗಿ ತಿಳಿಸಿದರು.
ಈ ನಡುವೆ , ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ನಿರ್ಗಮಿತ ಅಧ್ಯಕ್ಷ ರಾಹುಲ್ ಗಾಂಧಿ ಸಭೆ ಮುಗಿಯುವ ಮುನ್ನವೇ ಹೊರನಡೆದರು. ನಂತರ, ಸಮಾಲೋಚನಾ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದರು.
24 ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಪ್ರಾರಂಭವಾಯಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಮತ್ತು ಹಿರಿಯ ನಾಯಕ ಎ.ಕೆ.ಆಂಟನಿ ಅವರು ಸಂಭವನೀಯ ಅಧ್ಯಕ್ಷರ ಆಯ್ಕೆಯ ಬಗ್ಗೆ ಸಮಾಲೋಚನೆ ಮಾಡಿದರು.
ಹಿರಿಯ ನಾಯಕರಾದ ಮುಕುಲ್ ವಾಸ್ ನಿಕ್, ಸಚಿನ್ ಪೈಲಟ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ಸಂಭವನೀಯ ಅಧ್ಯಕ್ಷ ಆಯ್ಕೆ ಪಟ್ಟಿಯಲ್ಲಿರುವ ಮೂಂಚೂಣಿ ನಾಯಕರಾಗಿದ್ದಾರೆ .
ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹುದ್ದೆ ಅಲಂಕರಿಸುವ ಪ್ರಸ್ತಾಪವನ್ನು ಸೊನಿಯಾ ಕುಟುಂಬವೇ ತಿರಸ್ಕರಿಸಿದೆ.
ಯುವ ನಾಯಕರಿಗೆ ಪಟ್ಟ ಕಟ್ಟಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಶಶಿ ತರೂರ್, ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಮಿಲಿಂದ್ ದಿಯೋರಾ ಮೊದಲಾದವರು ಆಗ್ರಹಪಡಿಸಿದ್ದರು.
ಯುವ ನಾಯಕರಾದ ಜ್ಯೋತಿರಾಡಿತ್ಯ ಸಿಂಧಿಯಾ ಮತ್ತು ಸಚಿನ್ ಪೈಲಟ್ ಅವರಿಗೆ
ಪಟ್ಟಕಟ್ಟಬೇಕು ಎಂಬ ಕೂಗು ಸಹ ಪ್ರಬಲವಾಗಿ ಕೇಳಿ ಬಂದಿತ್ತು. ಇದಕ್ಕೆ ಕೆಲವು ಹಿರಿಯ, ಕಿರಿಯ ನಾಯಕರು ದ್ವನಿಗೂಡಿಸಿದ್ದರು.
Advertisement