ಚಂಡೀಗಢ: ಪೋಷಕರು ತನ್ನ ಇಷ್ಟಕ್ಕೆ ವಿರುದ್ಧವಾಗಿ ಗಿಫ್ಟ್ ನೀಡಿದ್ದ ಹೊಸ ಬಿಎಂಡಬ್ಲ್ಯು ಕಾರನ್ನೇ ಯುವಕನೊಬ್ಬ ನದಿಗೆ ತಳ್ಳಿದ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ಯಮುನಾನಗರದ ಯುವಕ ಈ ಕೃತ್ಯ ಎಸಗಿದ್ದು, ಈ ಯುವಕ ಜಾಗ್ವಾರ್ ಕಂಪನಿಯ ಐಷಾರಾಮಿ ಕಾರು ಕೊಡಿಸುವಂತೆ ಪೋಷಕರಿಗೆ ಬೇಡಿಕೆ ಇಟ್ಟಿದ್ದ. ಆದರೆ ತಂದೆ ಜಾಗ್ವರ್ ಬದಲು ಬಿಎಂಡಬ್ಲ್ಯು ಕಾರು ಗಿಫ್ಟ್ ಕೊಡಿಸಿದ್ದರು. ಇದರಿಂದ ಆಕ್ರೋಶಗೊಂಡ ಯುವಕ ಅಪ್ಪ ಕೊಡಿಸಿದ ಬಿಎಂಡಬ್ಲ್ಯು ಐಷಾರಾಮಿ ಕಾರನ್ನು ನದಿಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೋರೂಂನಿಂದ ಕಾರನ್ನು ಪಡೆದುಕೊಂಡು ಮನೆಗೆ ತಂದ ಯುವಕ ಬಳಿಕ ಅದನ್ನು ಚಲಾಯಿಸಿಕೊಂಡು ಹೋಗಿ ಉಕ್ಕಿ ಹರಿಯುತ್ತಿದ್ದ ನದಿಯೊಳಗೆ ನೂಕಿದ್ದಾನೆ. ಅಲ್ಲದೆ ತನ್ನ ಈ ಕೃತ್ಯವನ್ನು ಮೊಬೈಲ್ ಫೋನ್ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.
ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಬದಲು ನದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳಲ್ಲಿ ಸಿಲುಕಿಕೊಂಡಿತು. ಈ ಸಂದರ್ಭದಲ್ಲಿ ಯುವಕನಿಗೆ ಜ್ಞಾನೋದಯವಾಯಿತು ಅನಿಸುತ್ತದೆ. ತಕ್ಷಣವೇ ಆತ ನುರಿತ ಮುಳುಗುತಜ್ಞರ ಸಹಾಯದಿಂದ ಕಾರನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ. ಆದರೆ, ಅದು ಸಾಧ್ಯವಾಗಿಲ್ಲ. ಸದ್ಯ ಪೊಲೀಸರು ಯುವಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
Advertisement