ಶ್ರೀನಗರ: ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ 10 ಸಾವಿರಕ್ಕೂ ಹೆಚ್ಚುಮಂದಿ ಜಮಾವಣೆಗೊಂಡು ಭಾರಿ ಪ್ರತಿಭಟನೆ ನಡೆಸಿದ್ದಾರೆ ಎಂಬ ವರದಿಗಳನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಶನಿವಾರ ತಳ್ಳಿಹಾಕಿದ್ದು, ಈ ಕುರಿತ ಮಾಧ್ಯಮಗಳ ವರದಿ ಕಪೋಲ ಕಲ್ಪಿತ ಹಾಗೂ ಸುಳ್ಳು ಎಂದು ಹೇಳಿದೆ.
ರಾಯಿಟರ್ಸ್ ಸುದ್ದಿ ಸಂಸ್ಥೆ ಮೊದಲು ಈ ವರದಿಯನ್ನು ಪ್ರಕಟಿಸಿತ್ತು. ಈ ವರದಿಯನ್ನು ಆಧರಿಸಿ ಪಾಕಿಸ್ತಾನದ ಡಾನ್ ದಿನ ಪತ್ರಿಕೆ ಶ್ರೀನಗರದಲ್ಲಿ 10 ಸಾವಿರಕ್ಕೂ ಹೆಚ್ಚಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಮಾಡಿದೆ. ಈ ವರದಿ ಸಂಪೂರ್ಣ ಕಪೋಲ ಕಲ್ಪಿತ ಹಾಗೂ ಸುಳ್ಳಿನಿಂದ ಕೂಡಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶ್ರೀನಗರ ಹಾಗೂ ಬಾರಾಮುಲ್ಲದಲ್ಲಿ ಕೆಲವು ಬೆರಳೆಣಿಕೆಯ ಜನರು ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗಳಲ್ಲಿ 20 ಕ್ಕೂ ಹೆಚ್ಚಿನ ಜನರು ಭಾಗವಹಿಸಿರಲಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಆಗಸ್ಟ್ 6 ರಂದು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡನಾ ವಿಧೇಯಕಕ್ಕೆ ಸಂಸತ್ತು ಅನುಮೋದನೆ ನೀಡಿದ ನಂತರ ರಾಜ್ಯದಲ್ಲಿ 144ರ ನಿಷೇಧಾಜ್ಞೆ ವಿಧಿಸಲಾಗಿದೆ.
Advertisement