ನವದೆಹಲಿ: ಮುಸಲ್ಮಾನರ ಪವಿತ್ರ ಹಬ್ಬ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ನ್ನು ದೇಶಾದ್ಯಂತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಸೋಮವಾರ ಬೆಳಗ್ಗೆಯಿಂದಲೇ ಆಚರಣೆ ಮಾಡುತ್ತಿದ್ದಾರೆ.
ಸಾರ್ವಜನಿಕ ಮೈದಾನಗಳಲ್ಲಿ ಸೇರಿ ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಶ್ರದ್ಧೆಯಿಂದ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರ ದಾಳಿ ಆತಂಕದ ನಡುವೆಯೇ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದು, ಸೇನಾಪಡೆಗಳ ರಕ್ಷಣೆ ನಡುವೆ ಶ್ರೀನಗರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಕಶ್ಮೆರೆ ಗೇಟ್ ನಲ್ಲಿರುವ ಪಂಜಾ ಶರೀಫ್ ದರ್ಗಾದಲ್ಲಿ ಸಾರ್ವಜನಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.ದೆಹಲಿಯ ಜಮಾ ಮಸೀದಿಯಲ್ಲಿ ಜನರು ನಮಾಜ್ ನಲ್ಲಿ ಸಹೋದರ ಭಾತೃತ್ವದಿಂದ ಪಾಲ್ಗೊಂಡಿದ್ದರು.ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ಈದ್ಗಾ ಮಸೀದಿಯಲ್ಲಿ ಸಾರ್ವಜನಿಕ ಪ್ರಾರ್ಥನೆಯಲ್ಲಿ ಜನರು ಭಾಗವಹಿಸಿದ್ದರು.
ಮುಂಬೈಯ ಹಮಿದಿಯಾ ಮಸೀದಿ ಹೊರಗೆ ಜನರು ನಮಾಜ್ ನಲ್ಲಿ ಭಾಗವಹಿಸಿದ್ದು ಕಂಡುಬಂತು.
ದೇಶದ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ಶುಭಾಶಯ ತಿಳಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೇಶವಾಸಿಗಳಿಗೆ ಈದ್ ಹಬ್ಬದ ಶುಭಾಶಯಗಳು, ಈದ್ ನ ಜುಹಾ ಪ್ರೀತಿ, ಭ್ರಾತೃತ್ವ ಮತ್ತು ಮಾನವೀಯತೆಯ ಸೇವೆಯನ್ನು ಸಂಕೇತಿಸುತ್ತದೆ. ನಮ್ಮ ಸಂಯೋಜಿತ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಸಾರ್ವತ್ರಿಕ ಮೌಲ್ಯಗಳಿಗೆ ನಾವು ಬದ್ಧರಾಗೋಣ ಎಂದು ಸಂದೇಶ ಹೇಳಿದ್ದಾರೆ.
Advertisement