ನವದೆಹಲಿ: ಕಾಶ್ಮೀರದ ಆರ್ಟಿಕಲ್ 370 ರದ್ದುಗೊಳಿಸಿ ಎಲ್ಲರೂ ದಂಗಾಗುವಂತೆ ಮಾಡಿದ್ದ ಗೃಹ ಸಚಿವ ಅಮಿತ್ ಶಾ ಈಗ ಮತ್ತೊಂದು ಐತಿಹಾಸಿಕ ನಡೆಗೆ ಸಿದ್ಧರಾಗುತ್ತಿದ್ದಾರೆ.
ಕಾಶ್ಮೀರದಲ್ಲಿ ಹೆಚ್ಚು ಸೇನಾ ಪಡೆಗಳನ್ನು ನಿಯೋಜಿಸುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಆ.15 ಕ್ಕೆ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ ಈ ಕೆಲಸವನ್ನು ಅಮಿತ್ ಶಾ ಮಾಡಲಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ.
ಅಮಿತ್ ಶಾ ಶ್ರೀನಗರಕ್ಕೆ ತೆರಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜಮ್ಮು-ಕಾಶ್ಮೀರ ವಿಭಜನೆಯ ನಂತರ ಹೆಚ್ಚು ಕುತೂಹಲ ಮೂಡಿಸಿರುವ ಅಮಿತ್ ಶಾ ಭೇಟಿ ಬಗ್ಗೆ ಅಲ್ಲಿನ ಅಧಿಕಾರಿಗಳು ಈ ವರೆಗೂ ಸ್ಪಷ್ಟನೆ ನೀಡಿಲ್ಲ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಾಶ್ಮೀರದ ಸ್ಥಿತಿಗಳನ್ನು ಗಮನಿಸುತ್ತಿದ್ದು, ಸ್ವಾತಂತ್ರ್ಯದಿನಾಚರಣೆಯಂದು ಲಾಲ್ ಚೌಕ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಜಿತ್ ದೋವಲ್ ಸಹ ಭಾಗಿಯಗಲಿದ್ದಾರೆ ಎಂದು ತಿಳಿದುಬಂದಿದೆ.
ಕಾಶ್ಮೀರ ಪ್ರತ್ಯೇಕತಾವಾದಿಗಳು, ಅಲ್ಲಿನ ಸ್ಥಳೀಯ ನಾಯಕರು ಆರ್ಟಿಕಲ್ 370 ರದ್ದತಿ ಬಳಿಕ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದಾರೆ. ಈ ನಡುವೆ ಅಮಿತ್ ಶಾ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಾರೋಹಣ ಮಾಡಿದ್ದೇ ಆದಲ್ಲಿ ಪ್ರತ್ಯೇಕತಾವಾದಿಗಳ ಆಟಾಟೋಪಕ್ಕೆ ಬ್ರೇಕ್ ಬಿದ್ದಂತಾಗುತ್ತದೆ.
Advertisement