ನವದೆಹಲಿ: ರಾಜಸ್ಥಾನದ ಜೋಧ್ ಪುರದಿಂದ ಪಾಕಿಸ್ತಾನದ ಕರಾಚಿಗೆ ಸಂಪರ್ಕ ಕಲ್ಪಿಸುತ್ತಿದ್ದ ಥಾರ್ ಲಿಂಕ್ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಭಾರತ ಇಂದು ಸ್ಥಗಿತಗೊಳಿಸಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಇಂದು ಈ ರೈಲು ಸಂಚರಿಸಲಿಲ್ಲ ಎಂದು ವಾಯುವ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಭಯ್ ಶರ್ಮಾ ತಿಳಿಸಿದ್ದಾರೆ. ಮುಂದಿನ ಆದೇಶದವರೆಗೂ ಈ ರೈಲಿನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜೋಧ್ ಪುರದ ಭಗತ್ ಕಿ ಕೊತ್ತಿ ರೈಲ್ವೆ ನಿಲ್ದಾಣದಿಂದ ಮುನಾಬಾವೊ ವರೆಗೂ ಥಾರ್ ಲಿಂಕ್ ಎಕ್ಸ್ ಪ್ರೆಸ್ ರೈಲು ಸಂಚರಿಸುತಿತ್ತು. ಪಾಕಿಸ್ತಾನಕ್ಕೆ ಹೋಗಲು ಈ ರೈಲಿನಲ್ಲಿ 45 ಜನರು ಟಿಕೆಟ್ ಬುಕ್ ಮಾಡಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಂಡು ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಜೋಧ್ ಪುರಕ್ಕೆ ತೆರಳುತ್ತಿದ್ದ ರೈಲನ್ನು ಸ್ಥಗಿತಗೊಳಿಸುತ್ತಿರುವುದಾಗಿ ಪಾಕಿಸ್ತಾನ ರೈಲು ಸಚಿವ ಶೇಕ್ ರಷೀದ್ ಅಹ್ಮದ್ ಆಗಸ್ಟ್ 9 ರಂದು ಘೋಷಿಸಿದ್ದರು.
ಇದಕ್ಕೆ ಪ್ರತಿಯಾಗಿ ಇಂದಿನಿಂದ ರಾಜಸ್ಥಾನದ ಜೋಧ್ ಪುರದಿಂದ ಪಾಕಿಸ್ತಾನದ ಕರಾಚಿಗೆ ಸಂಪರ್ಕ ಕಲ್ಪಿಸುತ್ತಿದ್ದ ಥಾರ್ ಲಿಂಕ್ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಇಂದು ಸ್ಥಗಿತಗೊಳಿಸಲಾಗಿದೆ.
Advertisement