ಮೀಸಲಾತಿ ಬಗ್ಗೆ ಚರ್ಚೆ ಅಗತ್ಯ ಎಂದ ಮೋಹನ್ ಭಾಗವತ್, ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ

ಮೀಸಲಾತಿ ಬಗ್ಗೆ ಸೌಹಾರ್ದಯುತ ಚರ್ಚೆ ಅಗತ್ಯ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದು, ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬೇಕೋ ಅಥವಾ ಬೇಡ ಎಂಬ ಇಕ್ಕಟ್ಟಿಗೆ ಬಿಜೆಪಿ ಸಿಲುಕಿದೆ.
ಮೋಹನ್ ಭಾಗವತ್
ಮೋಹನ್ ಭಾಗವತ್

ನವದೆಹಲಿ: ಮೀಸಲಾತಿ ಬಗ್ಗೆ ಸೌಹಾರ್ದಯುತ ಚರ್ಚೆ ಅಗತ್ಯ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದು, ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬೇಕೋ ಅಥವಾ ಬೇಡ ಎಂಬ ಇಕ್ಕಟ್ಟಿಗೆ ಬಿಜೆಪಿ ಸಿಲುಕಿದೆ.

ಈ ಮಧ್ಯೆ ಮೋಹನ್ ಭಾಗವತ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಆರ್ ಎಸ್ಎಸ್, ಮೀಸಲಾತಿ ಕುರಿತು ಭಾಗವತ್ ನೀಡಿರುವ ಹೇಳಿಕೆಯನ್ನು ಮಾಧ್ಯಮಗಳು ಅನಗತ್ಯವಾಗಿ ವಿವಾದ ಮಾಡುತ್ತಿವೆ ಎಂದು ದೂರಿದೆ. ಅಲ್ಲದೆ ಯಾವುದೇ ವಿಷಯದಲ್ಲಿ ಚರ್ಚೆಯು ಸೌಹಾರ್ದಯುತ ವಾತಾವರಣದಲ್ಲಿ ನಡೆಯಬೇಕು ಎಂಬುದಷ್ಟೇ ಅವರ ವಾದವಾಗಿದೆ ಎಂದು ಸ್ಪಷ್ಟಪಡಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಸರು ಹೇಳಲು ಇಚ್ಛಿಸದ ಇಬ್ಬರು ಬಿಜೆಪಿ ರಾಜ್ಯಸಭಾ ಸದಸ್ಯರು, ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ನಲ್ಲಿ ವಿಧಾಸಭೆ ಚುನಾವಣೆ ಇರುವುದರಿಂದ ಅವರ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಸದ್ಯ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ಇದೇ ವೇಳೆ, ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿವೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. 

ಕಳೆದ ಭಾನುವಾರ ಗ್ಯಾನ್ ಉತ್ಸವದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, ಮೀಸಲಾತಿ ಪರ ಇರುವವರು ಮತ್ತು ವಿರೋಧಿಸುವವರ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಹೇಳಿದ್ದರು.

ಈ ಹಿಂದೆ ನಾನು ಮೀಸಲಾತಿ ಬಗ್ಗೆ ಮಾತನಾಡಿದಾಗ , ಅನಗತ್ಯ ಪ್ರತಿಕ್ರಿಯೆಗಳ ಮೂಲಕ ಇಡೀ ಚರ್ಚೆಯ ದಿಕ್ಕನ್ನೇ ಬದಲಾಯಿಸಲಾಯಿತು. ಮೀಸಲಾತಿ ಬೇಡ ಎನ್ನುವವರು ಮೀಸಲಾತಿ ಪಡೆಯುತ್ತಿರುವವರು ಹಾಗೂ ಅದರ ಪರವಾಗಿರುವವರ ಇಂಗಿತವನ್ನು ಅರ್ಥೈಸಿಕೊಂಡು ನಂತರ ಮಾತನಾಡಬೇಕು. ಮೀಸಲಾತಿ ಬೇಕು ಎನ್ನುವವರು ಕೂಡ ವಿರೋಧಿಸುವವರ ಮನದ ಇಂಗಿತವನ್ನು ಮೊದಲು ತಿಳಿಯಬೇಕಿದೆ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com