ಡೆಹ್ರಾಡೂನ್: ಉತ್ತರಾಖಂಡದಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ಸಾಗಿಸುತ್ತಿದ್ದ ಹೆಲಿಕಾಪ್ಟರ್ ಬುಧವಾರ ಪತನವಾಗಿದ್ದು, ದುರಂತದಲ್ಲಿ ಮೂವರು ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ.
ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಯನ್ನು ಹೆರಿಟೇಜ್ ಏವಿಯೇಷನ್ಗೆ ಸೇರಿದ ಹೆಲಿಕಾಪ್ಟರ್ ನಲ್ಲಿ ಹೊತ್ತೊಯ್ಯಲಾಗುತ್ತಿತ್ತು. ಡೆಹ್ರಾಡೂನ್ನಿಂದ ಪರಿಹಾರ ಸಾಮಗ್ರಿ ಹೊತ್ತ ಹೆಲಿಕಾಪ್ಟರ್ ಉತ್ತರಾಕಾಶಿಯ ಅರ್ಕೋಟ್ ಗ್ರಾಮದಲ್ಲಿ ಕೆಲವೊಂದು ಸಾಮಗ್ರಿಯನ್ನು ಇಳಿಸಿತ್ತು. ನಂತರ ಮೋಲ್ಡಿ ಗ್ರಾಮಕ್ಕೆ ಹೆಲಿಕಾಪ್ಟರ್ ತೆರಳುತ್ತಿತ್ತು. ಈ ವೇಳೆ ಹೆಲಿಕಾಪ್ಟರ್ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದು ಪತನಗೊಂಡಿದೆ.
ದುರ್ಘಟನೆಯಲ್ಲಿ ಪೈಲಟ್ಗಳಾದ ರಾಜ್ಪಾಲ್, ಕ್ಯಾಪ್ಟನ್ ಲಾಲ್ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ನಿವಾಸಿ ರಮೇಶ್ ಸಾವರ್ ಎಂಬುವವರು ಮೃತಪಟ್ಟಿದ್ದಾರೆ.
ಎಲ್ಲರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement