ಸೆಪ್ಟೆಂಬರ್ 1ರಿಂದ ಸಂಚಾರ ನಿಯಮ ಕಠಿಣ, ಪೋಷಕರು, ಮಾಲೀಕರಿಗೆ ಶಿಕ್ಷೆ

2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ 63 ನಿಯಮಗಳು ಸೆಪ್ಟೆಂಬರ್ 1ರಿಂದ ಜಾರಿಯಾಗಲಿದ್ದು, ಸಂಚಾರ ನಿಯಮವನ್ನು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಾರಿಗೆ ನಿಯಮ ಉಲ್ಲಂಘನೆಗಳಿಗೆ ಭಾರಿ ದಂಡ, ಚಾಲನಾ ಪರವಾನಗಿ ಪಡೆಯಲು ಇದ್ದ ಕನಿಷ್ಠ ವಿದ್ಯಾರ್ಹತೆಯ ನಿರ್ಬಂಧ ಸಡಿಲ

ನವದೆಹಲಿ: 2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ 63 ನಿಯಮಗಳು ಸೆಪ್ಟೆಂಬರ್ 1ರಿಂದ ಜಾರಿಯಾಗಲಿದ್ದು, ಸಂಚಾರ ನಿಯಮವನ್ನು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣಗೊಳಿಸಿದೆ.

ಈ ಪೈಕಿ ಸೆಪ್ಟೆಂಬರ್ 1 ಹಲವು ನಿಯಮಗಳು ಜಾರಿಯಾಗಲಿದ್ದು, ಇನ್ನೂ ಕೆಲವು ನಿಯಮಗಳು ಡಿಸೆಂಬರ್ 1ರಿಂದ ಜಾರಿಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

ಇನ್ನು ಸೆಪ್ಟೆಂಬರ್ 1 ರಿಂದ ಜಾರಿಯಾಗಲಿರುವ ನೂತನ ನಿಯಮಗಳ ಪಟ್ಟಿಯಲ್ಲಿ ದಂಡ, ಪರವಾನಗಿ, ನೋಂದಣಿ ಮತ್ತು ರಾಷ್ಟ್ರೀಯ ಸಾರಿಗೆ ನೀತಿಗೆ ಸಂಬಂಧಿಸಿದ ನಿಯಮಗಳು ಮಾತ್ರ ಇರಲಿವೆ. ಅದರಂತೆ ವಾಹನ ಚಾಲನಾ ಪರವಾನಗಿಯನ್ನು ಪಡೆಯಲು ಇದ್ದ ಕನಿಷ್ಠ ವಿದ್ಯಾರ್ಹತೆಯ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಅಲ್ಲದೆ ವಾಹನ ಚಾಲನಾ ಪರವಾನಗಿಯ ಅವಧಿ ಮುಗಿದ ನಂತರ ಈಗ ಒಂದು ತಿಂಗಳ ಒಳಗೆ ದಂಡರಹಿತವಾಗಿ ನವೀಕರಣ ಮಾಡಿಕೊಳ್ಳಬಹುದು. ಈಗ ಈ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ.

ಸಂಚಾರಿ ನಿಯಮ  ಉಲ್ಲಂಘನೆಗಳಿಗೆ ಭಾರಿ ದಂಡ, ಶಿಕ್ಷೆ
ಇನ್ನು ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಚಾಲನಾ ಪರವಾನಗಿಯನ್ನು ಅನರ್ಹಗೊಳಿಸಲಾಗುತ್ತದೆ. ಅನರ್ಹತೆಯ ಅವಧಿಯ ನಂತರ ಆ ವ್ಯಕ್ತಿಯು ಮರು ತರಬೇತಿ ಪಡೆದರೆ ಮಾತ್ರ ಪರವಾನಗಿಯನ್ನು ನೀಡಲಾಗುತ್ತದೆ. ಅಂತೆಯೇ ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡದ ಪ್ರಮಾಣವನ್ನು ಕೂಡ ಗಣನೀಯವಾಗಿ ಏರಿಕೆ ಮಾಡಲಾಗಿದ್ದು,  ಪರವಾನಗಿ ಇಲ್ಲದೆ ಚಾಲನೆ ಮಾಡಿದರೆ 5,000 ರೂವರೆಗೂ ದಂಡ ವಿಧಿಸಬಹುದಾಗಿದೆ. ಅಲ್ಲದೆ ಕುಡಿದು ವಾಹನ ಚಾಲನೆಗೆ 2 ರಿಂದ 10 ಸಾವಿರ ರೂ, ಅತಿವೇಗದ ಚಾಲನೆಗೆ 1 ಸಾವಿರ ರೂಗಳ ವರೆಗೂ ದಂಡ ಹಾಕಲಾಗುತ್ತದೆ. ಇನ್ನು ರಸ್ತೆಯಲ್ಲಿ ರೇಸಿಂಗ್, ಡ್ರ್ಯಾಗ್ ರೇಸ್, ಬೈಕ್ ಸ್ಟಂಟ್ ಗಳಂತಹ ಅಪಾಯಕಾರಿ ಚಟುವಟಿಕೆಗಳಿಗೆ 5 ಸಾವಿರ ರೂವರೆಗಿನ ದಂಡ, ಪರವಾನಗಿ ಅನರ್ಹತೆ ಮಾಡುವ ಸಾಧ್ಯತೆ ಇದೆ. 

ಅಂತೆಯೇ ವಿಮೆ ಇಲ್ಲದೆ ವಾಹನ ಚಾಲನೆಗೆ ಕನಿಷ್ಠ 1 ಸಾವಿರ ರೂ ದಿಂದ 2 ಸಾವಿರ ರೂವರೆಗೆ ದಂಡ ಹಾಕಲಾಗುತ್ತದೆ. ಅಲ್ಲದೆ ಅಯಕಾರಿ ಚಾಲನೆಗೆ ಕನಿಷ್ಠ 1,000 ಸಾವಿರ ರೂದಿಂದ  5,000 ರೂಗಳವರೆಗೆ ದಂಡ ಹಾಕಲಾಗುತ್ತದೆ. ಇನ್ನು ದ್ವಿಚಕ್ರವಾಹನದಲ್ಲಿ ಓವರ್‌ ಲೋಡಿಂಗ್ (ಇಬ್ಬರಗಿಂತ ಹೆಚ್ಚು ಮಂದಿ ಪ್ರಯಾಣಿಸಿದರೆ);2 ಸಾವಿರ ರೂವರೆಗೂ ದಂಡ ಮತ್ತು ಮೂರು ತಿಂಗಳು ಚಾಲನಾ ಪರವಾನಗಿ ಅಮಾನತು ಮಾಡಬಹುದಾಗಿದೆ.

ಪೋಷಕರು ಮತ್ತು ಮಾಲೀಕರಿಗೆ ಸಜೆ
ಇನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿದರೆ, ವಾಹನ ಚಾಲನೆ ವೇಳೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಮತ್ತು ಅಪಘಾತ ಮಾಡಿದರೆ ಅದಕ್ಕೆ ಆ ಮಕ್ಕಳ ಪೋಷಕರು ಅಥವಾ ಆ ವಾಹನದ ಮಾಲಿಕರೇ ಹೊಣೆಯಾಗುತ್ತಾರೆ. ಗಂಭೀರ ಸ್ವರೂಪದ ಉಲ್ಲಂಘನೆಯಾಗಿದ್ದರೆ ಆ ಮಕ್ಕಳನ್ನು ಬಾಲಾಪರಾಧಿಗಳ ಕಾನೂನಿನ ಅನ್ವಯ ಕ್ರಮ ಎದುರಿಸಬೇಕಾಗುತ್ತದೆ.  ಅಂತೆಯೇ ಆ ವಾಹನದ ನೋಂದಣಿಯನ್ನು 1 ವರ್ಷದವರೆಗೆ ಅಮಾನತಿನಲ್ಲಿ ಇಡಲಾಗುತ್ತದೆ.  ಆ ಮಕ್ಕಳಿಗೆ 25 ವರ್ಷ ತುಂಬುವವರೆಗೆ ವಾಹನ ಚಾಲನಾ ಪರವಾನಿಗೆಯನ್ನು ನೀಡಲಾಗುವುದಿಲ್ಲ. ಅಲ್ಲದೆ ಪೋಷಕರು ಅಥವಾ ವಾಹನ ಮಾಲೀಕರು 25 ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ. ಅಲ್ಲದೆ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಪೋಷಕರು ಅಥವಾ ಮಾಲೀಕರು  3 ವರ್ಷ ಜೈಲುವಾಸ ಅನುಭವಿಸಬೇಕಾಗುತ್ತದೆ.

ರಾಷ್ಟ್ರೀಯ ಸಾರಿಗೆ ನೀತಿ
ಸರಕು ಸಾಗಣೆ ಮತ್ತು ಬಸ್‌ಗಳ ಸಂಚಾರಕ್ಕೆ ರಾಷ್ಟ್ರೀಯ ಸಾರಿಗೆ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಲಿದೆ. ಪರ್ಮಿಟ್, ತೆರಿಗೆಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ಸಡಿಲಗೊಳಿಸಲಾಗುತ್ತದೆ. ಇದರಿಂದ ಸಾರಿಗೆ ಉದ್ಯಮದ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com