ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿ ಮೂರು ದಿನಗಳ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ವಿಚಾರಣೆ ಪ್ರತಿಗಳನ್ನು ಹಾಜರುಪಡಿಸುವಂತೆ ನಿರ್ದೇಶನ ನೀಡಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಇಂದು ಸುಪ್ರೀಂಕೋರ್ಟಿನಲ್ಲಿ ಕೋರಿದ್ದಾರೆ.
ನ್ಯಾಯಾಧೀಶರಾದ ಆರ್ ಬಾನುಮತಿ ಮತ್ತು ಎಎಸ್ ಬೊಪ್ಪಣ್ಣ ಅವರನ್ನೊಳಗೊಂಡ ಪೀಠದ ಮುಂದೆ ವಾದ ಮಂಡಿಸಿದ ಪಿ. ಚಿದಂಬರಂ ಪರ ವಕೀಲ ಕಪಿಲ್ ಸಿಬಿಲ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್ 19, ಈ ವರ್ಷದ ಜನವರಿ 1 ಹಾಗೂ ಜನವರಿ 21 ರಂದು ನಡೆಸಿದ ವಿಚಾರಣೆ ಪ್ರತಿಗಳನ್ನು ಹಾಜರುಪಡಿಸುವಂತೆ ಇಡಿಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಜಾರಿ ನಿರ್ದೇಶನಾಲಯ ಆರೋಪಿಸುತ್ತಿರುವಂತೆ ವಿಚಾರಣೆಯಿಂದ ಚಿದಂಬರಂ ತಪ್ಪಿಸಿಕೊಂಡಿದ್ದಾರೆಯೇ ಎಂಬುದು ಈ ಪ್ರತಿಗಳಿಂದ ತಿಳಿಯಬಹುದು ಎಂದು ಕಪಿಲ್ ಸಿಬಲ್ ಹೇಳಿದರು. ಇದು ಕೇಸ್ ಡೈರಿಯ ಭಾಗವಾಗಿದ್ದು, ಆರೋಪಿಯನ್ನು ಕಸ್ಟಡಿಗೆ ಪಡೆಯಲು ದಾಖಲೆಗಳನ್ನು ಮುಚ್ಚಿಡಲು ಅವರಿಗೆ ಆಗುವುದಿಲ್ಲ ಎಂದು ನ್ಯಾಯಪೀಠದ ಮುಂದೆ ವಾದಿಸಿದರು
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಕೂಡಾ ಚಿದಂಬರಂ ಪರ ವಾದ ಮಂಡಿಸಿ, ಸಂವಿಧಾನದ 21 ನೇ ವಿಧಿಯ ಪ್ರಕಾರ ( ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಭೋಜನ ವಿರಾಮದ ನಂತರವು ವಾದ ಮುಂದುವರೆಯಿತು. ಐಎನ್ ಎಕ್ಸ್ ಮೀಡಿಯ ಹಗರಣದ ಆರೋಪದಡಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಚಿದಂಬರಂ ಅವರಿಗೆ ಇಂದಿನವರೆಗೂ ಬಂಧನದಿಂದ ರಕ್ಷಣೆಯನ್ನು ಅಪೆಕ್ಸ್ ಕೋರ್ಟ್ ವಿಸ್ತರಿಸಿತ್ತು.ಮಾಜಿ ಕೇಂದ್ರ ವಿತ್ತ ಸಚಿವ ಹಾಗೂ ಗೃಹ ಸಚಿವರು ಆಗಿದ್ದ ಪಿ. ಚಿದಂಬರಂ ವಿರುದ್ಧ 2017ರಲ್ಲಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲಿಸಿತ್ತು
Advertisement