ನವದೆಹಲಿ: ಕಾಶ್ಮೀರ ಕನ್ಯೆಯರ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ ಉತ್ತರ ಪ್ರದೇಶ ಬಿಜೆಪಿ ಶಾಸಕ ವಿಕ್ರಂ ಸೈನಿ ನೀಡಿದ್ದ ಹೇಳಿಕೆ ಉಲ್ಲೇಖಿಸಿ ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿದೆ.
ಕಾಶ್ಮೀರದಲ್ಲಿ ನಡೆದಿರುವ ಹಿಂಸೆಗಳ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯ ಜೊತೆಗೆ, ಕಾಶ್ಮೀರ ಮಹಿಳೆಯರ ಕುರಿತು ಬಾಯಿಗೆ ಬಂದಂತೆ ಮಾತನಾಡಿದ್ದ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆಯೂ ದನಿಎತ್ತಿರುವ ಪಾಕಿಸ್ತಾನ ಮಾನವಹಕ್ಕು ಸಚಿವೆ, ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಈ ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಕಾಶ್ಮೀರ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿರುವ ಅಂಶವನ್ನು ಪಾಕ್ ಮಾನವ ಹಕ್ಕು ಸಚಿವೆ ಶೆರೀನ್ ಮಜಾರಿ ವಿಶ್ವಸಂಸ್ಥೆಗೆ ಪತ್ರಬರೆದಿದ್ದರು. ಈ ಪತ್ರದಲ್ಲಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ.
ಈ ಪತ್ರದಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಉತ್ತರ ಪ್ರದೇಶ ಬಿಜೆಪಿ ಶಾಸಕ ವಿಕ್ರಂ ಸೈನಿ ಕಾಶ್ಮೀರ ಮಹಿಳೆಯರ ಕುರಿತು ಆಡಿದ್ದ ಮಾತುಗಳನ್ನು ಸೇರ್ಪಡೆಗೊಳಿಸಲಾಗಿದೆ.
ಲಿಂಗತಾರತಮ್ಯದ ಹಿಂಸಾಚಾರದಡಿ ವಿಕ್ರಮ್ ಸೈನಿ ಅವರಾಡಿದ್ದ ಮಾತುಗಳನ್ನು ಪಾಕಿಸ್ತಾನ ದಾಖಲಿಸಿದೆ. ಭಾರತೀಯ ಮುಸ್ಲಿಮರು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಬೇಕು,ಅವರು ಇನ್ನೂ ಮುಂದೆ ಬಿಳಿ ಮೈ ಬಣ್ಣದ ಕಾಶ್ಮೀರಿ ಕನ್ಯೆಯರನ್ನು ಲಗ್ನವಾಗಬಹುದು ಎಂದು ಬಹಿರಂಗ ಭಾಷಣದಲ್ಲಿ ತಿಳಿಸಿದ್ದರು.
ವಿಧಿ 370 ರದ್ದತಿಯ ನಂತರ ಕಾಶ್ಮೀರ ಈಗ ಮುಕ್ತ ಪ್ರವೇಶವಾಗಿದ್ದು, ಅಲ್ಲಿಂದ ಸೊಸೆಯಂದಿರನ್ನು ತರಬಹುದು. ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಬೇಟಿ ಬಚಾವೋ ಬೇಟಿ ಪಡಾವೊ ಕಾರ್ಯಕ್ರಮದಲ್ಲಿ ಹೇಳಿದ್ದರು.
ಖಟ್ಟರ್ ಹೇಳಿಕೆಯಿಂದ ಅವರ ತುಚ್ಛ ಮನಸ್ಥಿತಿ ವ್ಯಕ್ತವಾಗುತ್ತಿದೆ ಎಂದು ಬಿಎಸ್ ಪಿ ವರಿಷ್ಠೆ ಮಾಯಾವತಿ ಟೀಕಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕಾಶ್ಮೀರಿ ಮಹಿಳೆಯರ ಬಗ್ಗೆ ಖಟ್ಟರ್ ಹೇಳಿಕೆ ಕೀಳು ಮನಸ್ಥಿತಿಯದ್ದು ಆಕ್ರೋಶ ವ್ಯಕ್ತಪಡಿಸಿದ್ದರು.
ನಂತರ ಎಚ್ಚೆತ್ತುಕೊಂಡ ಖಟ್ಟರ್ ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ. ಹೆಣ್ಣು ಮಕ್ಕಳ ಬಗ್ಗೆ ಅತಿ ಹೆಚ್ಚಿನ ಗೌರವ ಹೊಂದಿದ್ದೇನೆ ಎಂದ ಸಮಜಾಯಿಷಿ ನೀಡುವ ಮೂಲಕ ತಪ್ಪು ತಿದ್ದುಕೊಂಡಿದ್ದರು. ರಾಹುಲ್ ಗಾಂಧಿ ಅವರು ಸಹ ತಮ್ಮ ಹೇಳಿಕೆಯನ್ನು ಬಳಸಿ ಪಾಕಿಸ್ತಾನ ಲಾಭ ಪಡೆಯಲು ಮುಂದಾಗುತ್ತಿದ್ದಂತೆ ಎಚ್ಚೆತ್ತುಕೊಂಡು, ಕಾಶ್ಮೀರ ದೇಶದ ಆಂತರಿಕ ವಿಷಯ. ಕಾಶ್ಮೀರದಲ್ಲಿನ ಪರಿಸ್ಥಿತಿಗೆ ನೆರೆಯ ಪಾಕಿಸ್ತಾನ ಕಾರಣ ದೂರಿದ್ದರು.
Advertisement