ನವದೆಹಲಿ: ಹೈದರಾಬಾದ್ ಪಶು ವೈದ್ಯೆ ಹತ್ಯಾಚಾರ ಪ್ರಕರಣ ದೇಶಾದ್ಯಂತ ಸುದ್ದಿಯಾಗುತ್ತಿರುವ ಬೆನ್ನಲ್ಲೇ ದೇಶದಾದ್ಯಂತ ಇರುವ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಅವುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ದಿಟ್ಟ ಕ್ರಮ ಕೈಗೊಂಡಿದೆ.
'ನಿರ್ಭಯ' ನಿಧಿಗೆ 100 ಕೋಟಿ ರೂಪಾಯಿಯನ್ನು ಮಂಜೂರು ಮಾಡಿರುವ ಕೇಂದ್ರ ಗೃಹ ಸಚಿವಾಲಯ, ಈ ಯೋಜನೆಯನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮಹಿಳಾ ಸಹಾಯ ಕೇಂದ್ರಗಳು ಪೊಲೀಸ್ ಠಾಣೆಗಳನ್ನು ಹೆಚ್ಚು ಮಹಿಳಾ-ಸ್ನೇಹಿ ಮತ್ತು ಅವರಿಗೆ ಸಮೀಪ ಇರುವಂತೆ ನೋಡಿಕೊಳ್ಳಲಾಗುತ್ತದೆ. ಹಾಗೂ ಈ ಸಹಾಯ ಕೇಂದ್ರಗಳಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನೇ ನಿಯೋಜಿಸಲಾಗುತ್ತದೆ. ಇನ್ನು ಮಹಿಳಾ ಸಹಾಯ ಕೇಂದ್ರದ ಅಧಿಕಾರಿಗಳಿಗೆ ಮಹಿಳೆಯರ ಬಗ್ಗೆ ಕಾಳಜಿ ವಹಿಸಲು ತರಬೇತಿ ನೀಡಲು ನಿರ್ಧರಿಸಲಾಗಿದ್ದು, ಜೊತೆಗೆ ಈ ಸಹಾಯ ಕೇಂದ್ರಗಳಲ್ಲಿ ಕಾನೂನು ನೆರವು, ಸಮಾಲೋಚನೆ, ಆಶ್ರಯ, ಪುನರ್ವಸತಿ, ತರಬೇತಿ ಇತ್ಯಾದಿಗಳಿಗೆ ಅನುಕೂಲವಾಗುವಂತೆ ವಕೀಲರು, ಮನಃ ಶಾಸ್ತ್ರಜ್ಞರು ಮತ್ತು ಎನ್ಜಿಒಗಳಂತಹ ತಜ್ಞರ ಸಮಿತಿ ಇರಲಿದೆ.
ಭಾರತದಾದ್ಯಂತ ಮಹಿಳೆಯರ ಸುರಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2013 ರಲ್ಲಿ ನಿರ್ಭಯ ನಿಧಿಯನ್ನು ಸ್ಥಾಪಿಸಿತ್ತು. ಏಳು ವರ್ಷಗಳ ಹಿಂದೆ, ನಿರ್ಭಯಾಳನ್ನು ಆರು ಜನ ಕಾಮಾಂಧ ರಾಕ್ಷಸರ ಗುಂಪು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿತ್ತು. ಈ ಪ್ರಕರಣ ವಿಶ್ವಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಮತ್ತೆ ಹೈದರಾಬಾದ್ ನಲ್ಲಿ ಇಂತಹುದೇ ಘಟನೆ ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ
Advertisement