ರಾಂಚಿ: ಜಾರ್ಖಂಡ್ ವಿಧಾನಸಭೆಯ ಎರಡನೇ ಹಂತದ ಮತದಾನ ಶನಿವಾರ ಪ್ರಗತಿಯಲ್ಲಿದ್ದು ಗುಮ್ಲಾದ ಸಿಸೈ ಕ್ಷೇತ್ರದಲ್ಲಿ ಭದ್ರತಾ ಪಡೆಯಿಂದ ಶಸ್ತಾಸ್ತ್ರಗಳನ್ನು ಕಸಿಯಲು ಯತ್ನಿಸುತ್ತಿದ್ದ ವೇಳೆ ಗುಂಡು ಹಾರಿಸಿದ್ದರಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ.
ಸಿಸೈ ಕ್ಷೇತ್ರದ ಬೂತ್ ಸಂಖ್ಯೆ 36ರಲ್ಲಿ ಭದ್ರತಾ ಪಡೆಯಿಂದ ಬಂದೂಕು ಕಸಿಯಲು ಯತ್ನಿಸಿದ ವ್ಯಕ್ತಿಗಳ ಮೇಲೆ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುರಾರಿ ಲಾಲ್ ಮೀನಾ ತಿಳಿಸಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಮೀನಾ ತಿಳಿಸಿದ್ದಾರೆ.
ಇಂದು ನಡೆಯುತ್ತಿರುವ ಎರಡನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಶೇಕಡಾ 12.35ರಷ್ಟು ಮತದಾನವಾಗಿದೆ.
Advertisement