ದೆಹಲಿ: ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ: 43 ಕಾರ್ಮಿಕರು ಸಾವು, ಹಲವರಿಗೆ ಗಾಯ 

ಭಾನುವಾರ ನಸುಕಿನ ಜಾವ ದೆಹಲಿಯ ರಾಣಿ ಜಾನ್ಸಿ ರಸ್ತೆಯಲ್ಲಿರುವ ಅನಜ್ ಮಂಡಿ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿ 43 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. 
ಅಗ್ನಿ ಅವಘಡ ಸಂಭವಿಸಿದ ಕಾರ್ಖಾನೆ ಬಳಿ ಅಗ್ನಿಶಾಮಕ ಸಿಬ್ಬಂದಿ
ಅಗ್ನಿ ಅವಘಡ ಸಂಭವಿಸಿದ ಕಾರ್ಖಾನೆ ಬಳಿ ಅಗ್ನಿಶಾಮಕ ಸಿಬ್ಬಂದಿ

ನವದೆಹಲಿ: ಭಾನುವಾರ ನಸುಕಿನ ಜಾವ ಉತ್ತರ ದೆಹಲಿಯ ರಾಣಿ ಜಾನ್ಸಿ ರಸ್ತೆಯಲ್ಲಿರುವ ಅನಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿ 43 ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.


ಇಂದು ನಸುಕಿನ ಜಾವ 5.22ಕ್ಕೆ ಅಗ್ನಿ ಅವಘಡದ ಸುದ್ದಿ ತಿಳಿಯುತ್ತಲೇ 30 ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಯಿತು. ರಕ್ಷಣಾ ಕಾರ್ಯ ಅಲ್ಲಿ ಭರದಿಂದ ಸಾಗಿದೆ. ಅಗ್ನಿ ಅವಘಡದ ಸ್ವರೂಪ ಗಂಭೀರವಾಗಿದ್ದು ಇನ್ನಷ್ಟು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ.


ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಗ್ನಿಶಾಮಕ ದಳದ ಉಪ ಮುಖ್ಯಾಧಿಕಾರಿ ಸುನಿಲ್ ಚೌಧರಿ, 600 ಚದರಡಿ ಸ್ಥಳದಲ್ಲಿ ಅಗ್ನಿ ಅವಘಡವುಂಟಾಗಿದೆ.ಕಾರ್ಖಾನೆ ಒಳಗೆ ತೀವ್ರ ಕತ್ತಲು ಕವಿದಿತ್ತು. ಶಾಲಾ ಬ್ಯಾಗುಗಳು, ಬಾಟಲ್ ಗಳು ಮತ್ತು ಇತರ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆಯಾಗಿದೆ. ಅಗ್ನಿ ಅವಘಡ ನಡೆಯುವ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರು ಒಳಗಿದ್ದರು. 


ನಾವು ಇದುವರೆಗೆ 15 ಮಂದಿಯನ್ನು ಸ್ಥಳದಿಂದ ಕಾಪಾಡಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದ್ದೇವೆ, ಕೆಲವರು ಗಾಯಗೊಂಡಿದ್ದು ಇನ್ನು ಕೆಲವರು ಹೊಗೆಗೆ ಉಸಿರುಗಟ್ಟಿ ತಲೆಸುತ್ತಿ ಬಿದ್ದಿದ್ದಾರೆ. ಈ ಘಟನೆ ನಡೆಯುವಾಗ ಕಾರ್ಖಾನೆಯೊಳಗೆ ಒಟ್ಟು 59 ಕಾರ್ಮಿಕರು ನಿದ್ದೆ ಮಾಡುತ್ತಿದ್ದರು ಎಂದು ಕಾರ್ಖಾನೆ ಮಾಲೀಕ ತಿಳಿಸಿದ್ದಾರೆ ಎಂದು ಚೌಧರಿ ಹೇಳಿದರು.


 ಮಧ್ಯಮ ಪ್ರಮಾಣದಲ್ಲಿ ಬೆಂಕಿ ಹತ್ತಿ ಉರಿದಿದ್ದು ಇದೀಗ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲಾಗಿದೆ ಎಂದರು. ರಕ್ಷಣಾ ಕಾರ್ಯ ಮುಂದುವರಿದಿದೆ. 


ಕುಟುಂಬದವರ ಆಕ್ರಂದನ: ಬೆಂಕಿ ಅವಘಡದಲ್ಲಿ ಕಾರ್ಮಿಕರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದವರು ಮತ್ತು ಸಮೀಪ ಬಂಧುಗಳು ಜಮಾಯಿಸಿದ್ದರು. ಮನೆಯವರ ಆಕ್ರಂದನ ಮುಗಿಲುಮುಟ್ಟಿತ್ತು. ಹಲವರಿಗೆ ತಮ್ಮ ಮನೆಯವರು ಯಾವ ಆಸ್ಪತ್ರೆಯಲ್ಲಿದ್ದಾರೆ, ಅವರ ಪರಿಸ್ಥಿತಿ ಏನಾಗಿದೆ ಎಂದು ಬೆಳಗ್ಗೆ ಮಾಹಿತಿ ಸಿಕ್ಕಿರಲಿಲ್ಲ. 


ಉತ್ತರ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಈ ಕಾರ್ಖಾನೆಯ ಹಲವು ಘಟಕಗಳು ಕಾರ್ಯನಿರ್ವಹಿಸುತ್ತಿವೆ.ಅಗ್ನಿ ಅವಘಡದ ಬಗ್ಗೆ ಹೊರಗಿನ ಜನರಿಗೆ ಗೊತ್ತಾಗಲು ಸ್ವಲ್ಪ ಸಮಯ ಹಿಡಿದಿದ್ದರಿಂದ ಸಾವಿನ ಸಂಖ್ಯೆ ಇಷ್ಟೊಂದು ಪ್ರಮಾಣಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.


ಮೃತಪಟ್ಟವರ ಶವಪರೀಕ್ಷೆಗೆ ಮತ್ತು ಗಾಯಗೊಂಡವರ ಚಿಕಿತ್ಸೆಗೆ ಆರ್ ಎಂಎಲ್, ಎಲ್ ಎನ್ ಜೆಪಿ ಮತ್ತು ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬೆಂಕಿಯಿಂದ ಹೊಗೆ ತುಂಬಿಕೊಂಡು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


ಗಾಯಗೊಂಡ 15 ಮಂದಿ ಕಾರ್ಮಿಕರನ್ನು ಎಲ್ ಎನ್ ಜೆಪಿ ಆಸ್ಪತ್ರೆಗೆ ಕರೆತರಲಾಗಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಕಿಶೋರ್ ಸಿಂಗ್ ತಿಳಿಸಿದ್ದಾರೆ. 

ಕಟ್ಟಡ ಮಾಲೀಕ ವಿರುದ್ಧ ದೂರು: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರಡಿ ಕೇಸು ದಾಖಲಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com