ವಿಜಯವಾಡ: ಈರುಳ್ಳಿ ದರ ಗಗನಕ್ಕೇರಿದ್ದು, ಈ ಹಿನ್ನೆಲೆಯಲ್ಲಿ ಜನರಿ ನೆರವಿಗೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ರೂ.25ಕ್ಕೆ ಮಾರಾಟ ಮಾಡುತ್ತಿದೆ. ಹೀಗಾಗಿ ಅಗ್ಗದ ದರದಲ್ಲಿ ಸರ್ಕಾರ ವಿತರಿಸುತ್ತಿರುವ ಈರುಳ್ಳಿ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ.
ಈರುಳ್ಳಿ ಖರೀದಿಗೆ ಬೆಳಿಗಿನ ಜಾವ 5 ಗಂಟೆಯಿಂದಲೇ ಜನರು ಸಾಲುಗಟ್ಟಿ ನಿಲ್ಲಲು ಆರಂಭಿಸಿದ್ದು, ಇದರಂತೆ ಸಾಲಿನಲ್ಲಿ ನಿಂತಿದ್ದ 55 ವರ್ಷದ ವ್ಯಕ್ತಿಯೊಬ್ಬರಿಗೆ ಹೃದಯ ಸ್ತಂಭನ ಎದುರಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೃಷ್ಣಜಿಲ್ಲೆಯ ರಿಥು ಬಜಾರ್ ನಲ್ಲಿ ನಡೆದಿದೆ.
ಸಂಬಯ್ಯ (55) ಮೃತ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಸಂಬಯ್ಯ ಅವರು ಬೆಳಿಗಿನ ಜಾವ 5 ಗಂಟೆಯಿಂದಲೇ ಈರುಳ್ಳಿ ಖರೀದಿ ಮಾಡಲು ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಹೃದಯ ಸ್ತಂಭನ ಎದುರಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದು, ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.
Advertisement