ಪಾಟ್ನಾ: ಕೇವಲ ತಮ್ಮ ಮತ ಬ್ಯಾಂಕ್ ರಕ್ಷಿಸಿಕೊಳ್ಳುವ ಕಾರಣಕ್ಕಾಗಿ ನಿರಾಶ್ರಿತರು ಹಾಗೂ ಒಳನುಸುಳುಕೋರ ನಡುವಣ ವ್ಯತ್ಯಾಸವನ್ನು ಗ್ರಹಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಬಿಹಾರ ಉಪ ಮುಖ್ಯಮಂತ್ರಿ ಸುಶಿಲ್ ಕುಮಾರ್ ಮೋದಿ ಲೇವಡಿ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ವಿಧೇಯಕ ಕುರಿತ ಕಾಂಗ್ರೆಸ್ ಅನುಸರಿಸುತ್ತಿರುವ ನಿಲುವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮೋದಿ, ಧರ್ಮದ ಹೆಸರಿನಲ್ಲಿ ತಾವು ಹುಟ್ಟಿದ ದೇಶಗಳಲ್ಲಿ ತಾರತಮ್ಯಕ್ಕೆ ಒಳಗಾಗಿರುವ ಹಿಂದೂ-ಕ್ರಿಶ್ಚಿಯನ್ ನಿರಾಶ್ರಿತರು ಹಾಗೂ ಅನಗತ್ಯ ಒಳನುಸುಳುಕೋರರ ನಡುವೆ ಇರುವ ವ್ಯತ್ಯಾಸವನ್ನು ಕಾಂಗ್ರೆಸ್ ಹಾಗೂ ಅದರ ಸಮಾನ ಮನಸ್ಕ ಪಕ್ಷಗಳು ಉದ್ದೇಶಪೂರ್ವಕವಾಗಿ ಗ್ರಹಿಸುತ್ತಿಲ್ಲ ಎಂದು ಆರೋಪಿಸಿದರು.
ಸಂವಿಧಾನದ ಕಲಂ 370 ಹಾಗೂ ತ್ರಿವಳಿ ತಲಾಖ್ ನಂತಹ ವಿವಾದಾಸ್ಪದ ವಿಷಯಗಳ ಕುರಿತು ದೇಶದ ಹಿತಾಸಕ್ತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ಸರ್ಕಾರದ ರಾಜಕೀಯ ಇಚ್ಛಾ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು. ಪೌರತ್ವ ತಿದ್ದುಪಡಿ ವಿಧೇಯಕ ಕೂಡಾ ಈ ರಾಜಕೀಯ ಇಚ್ಛಾಶಕ್ತಿಯಿಂದ ಸಂಸತ್ತಿನ ಅನುಮೋದನೆ ಪಡೆದುಕೊಳ್ಳಲಿದೆ ಎಂದು ಮೋದಿ ಅವರು ಆಶಯ ವ್ಯಕ್ತಪಡಿಸಿದರು. ಈ ವಿಧೇಯಕ ಸಂಸತ್ತಿನ ಅಂಗೀಕಾರ ಪಡೆದುಕೊಳ್ಳುವ ಮೂಲಕ ತಮ್ಮ ದೇಶಗಳನ್ನು ಬಲವಂತದಿಂದ ತೊರೆಯಲಿರುವ ಲಕ್ಷಾಂತರ ನಿರಾಶ್ರಿತರು ಭಾರತೀಯ ಪೌರತ್ವವನ್ನು ಘನತೆಯಿಂದ ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
Advertisement