ನವದೆಹಲಿ: 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಲುವ ಮೂಲಕ ಸ್ಥಿರ ಬಿಜೆಪಿ ಸರ್ಕಾರ ನೀಡಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಬಿಜೆಪಿಯ ಸಂಸದೀಯ ಸಭೆಯಲ್ಲಿ, ಕರ್ನಾಟಕದ ಬಿಜೆಪಿ ಸಾಧನೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸಭೆಯನ್ನುದ್ದೇಶಿಸಿ ಮಾತನಾಡುವುದಕ್ಕೂ ಮುನ್ನ ಮೋದಿಯವರು ಯಡಿಯೂರಪ್ಪ ಅವರಿಗೆ ಎದ್ದು ನಿಂತು ಗೌರವ ಸಲ್ಲಿಸಿದರು.
ಸಾಮಾನ್ಯವಾಗಿ ಪಕ್ಷದ ಪರವಾಗಿ ಮೋದಿಯವರು ವೇದಿಕೆ ಮೇಲೇರುತ್ತಿದ್ದಂತೆಯೇ ಗೌರವ ಸಲ್ಲಿಸುವುದು ವಾಡಿಕೆಯಲ್ಲಿದೆ. ಆದರೆ, ಮೋದಿ ವೇದಿಕೆ ಮೇಲೆ ಹೋಗುತ್ತಿದ್ದಂತೆಯೇ ಎಲ್ಲರನ್ನೂ ಎದ್ದು ನಿಲ್ಲುವಂತೆ ಸೂಚಿಸಿ, ಯಡಿಯೂರಪ್ಪ ಅವರಿಗೆ ಗೌರವ ಸಲ್ಲಿಸುವಂತೆ ತಿಳಿದರು. ಈ ವೇಳೆ ಮಾತನಾಡಿದ ಪ್ರಧಾನಮಂತ್ರಿಗಳು ಬಿಜೆಪಿಗೆ ಮತ ಚಲಾಯಿಸಿದ ಕರ್ನಾಟಕದ ಜನತೆಗೆ ಅಭಾರಿಯಾಗಿದ್ದೇನೆ. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲು ನಾವು ಬದ್ಧರಾಗಿದ್ದೇವೆಂದು ಹೇಳಿದರು ಎಂದು ಜೋಷಿ ತಿಳಿಸಿದ್ದಾರೆ.
Advertisement