ನವದೆಹಲಿ: ಭಾರತದ ಪೌರತ್ವ ತಿದ್ದುಪಡಿ ಮಸೂದೆ-2019ರ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆಗೆ ಭಾರತ ತೀಕ್ಷ ಪ್ರತ್ಯುತ್ತರ ನೀಡಿದ್ದು, ಭಾರತದ ಆಂತರಿಕ ವಿಷಯಗಳಲ್ಲಿ ತಲೆ ಹಾಕುವುದನ್ನು ಬಿಟ್ಟು ತನ್ನ ಆಂತರಿಕ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದೆ.
ಈ ಕುರಿತಂತೆ ಮಾತನಾಡಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು, 'ಪಾಕಿಸ್ತಾನ ಭಾರತದ ಆಂತರಿಕ ವಿಷಯಗಳಲ್ಲಿ ತಲೆ ಹಾಕುವುದನ್ನು ಬಿಟ್ಟು, ತನ್ನಲ್ಲಿರುವ ಅಲ್ಪಸಂಖ್ಯಾತರ ಕುರಿತು ಗಮನ ಹರಿಸಬೇಕು. ಪಾಕ್ ಪ್ರಧಾನಿಯ ಪ್ರತಿಯೊಂದು ಹೇಳಿಕೆಗೆ ಉತ್ತರಿಸುವ ಅಗತ್ಯವಿಲ್ಲ ಎಂದಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಬಹುತೇಕ ಹೇಳಿಕೆಗಳಿಗೆ ಯಾವುದೇ ಆಧಾರ ಇರುವುದಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ 'ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅನಗತ್ಯ ಹೇಳಿಕೆಗಳನ್ನು ನೀಡುವ ಬದಲು ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರ ಸ್ಥಿತಿ-ಗತಿಗಳ ಕಡೆಗೆ ಗಮನಹರಿಸಬೇಕು. ಭಾರತದ ಆಂತರಿಕ ವಿಷಯಗಳ ಕುರಿತು ಹೇಳಿಕೆಗಳಿಂದ ನೀಡುವುದರಿಂದ ಹಿಂದೆ ಸರಿಯಬೇಕು ಎಂದು ಹೇಳಿದ್ದಾರೆ.
ಅಂತೆಯೇ 'ಬಾಂಗ್ಲಾದೇಶದ ವಿದೇಶಾಂಗ ಸಚಿವರಾಗಿರುವ ಅಬ್ದುಲ್ ಮೊಮೆನ್ ಅವರು ಭಾರತ ಭೇಟಿಯಿಂದ ಹಿಂದೆ ಸರಿದಿರುವುದರ ಕುರಿತೂ ಕೂಡ ಪ್ರತಿಕ್ರಿಯೆ ನೀಡಿರುವ ರವೀಶ್ ಕುಮಾರ್, 'ಬಾಂಗ್ಲಾದೇಶದ ಜೊತೆ ಭಾರತ ಉತ್ತಮ ಸಂಬಂಧ ಹೊಂದಿದ್ದು, ಉಭಯ ದೇಶಗಳ ಮುಖಂಡರು ನೀಡಿರುವ ಜಂಟಿ ಹೇಳಿಕೆ ಪ್ರಕಾರ, ಇದು ಎರಡೂ ದೇಶಗಳ ನಡುವಿನ ಬಾಂಧವ್ಯದ ಸುವರ್ಣ ಕಾಲವಾಗಿದೆ' ಎಂದು ಹೇಳಿದ್ದಾರೆ.
Advertisement