ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಗುರುವಾರ ದೇಶದ 13 ಮಹಾನಗರಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ. ನಿಷೇಧಾಜ್ಞೆ ಇದ್ದರೂ ಉತ್ತರಪ್ರದೇಶ, ಬಿಹಾರ, ಗುಜರಾತ್, ಪಶ್ಚಿಮ ಬಂಗಾಳ, ಕರ್ನಾಟಕ ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ.
ಉತ್ತರಪ್ರದೇಶದ ಲಖನೌನಲ್ಲಿ ಪ್ರತಿಭಟನಾಕಾರರು ಕಲ್ಲು ತೂರಿ 12 ಬೈಕ್ ಗಳು, ಕಾರು, ಮಾಧ್ಯಮದ ನೇರಪ್ರಸಾರ ವಾಹನಕ್ಕೆ ಬೆಂಕಿ ಹೆಚ್ಚಿದರು.
ಈ ವೇಳೆ ಪೊಲೀಸರ ಗೋಲಿಬಾರ್'ಗೆ ಓರ್ವ ಬಲಿಯಾಗಿದ್ದಾನೆ. ಆದರೆ, ಈತ ಪ್ರತಿಭಟನಾಕಾರನಲ್ಲ. ಹಿಂಸೆ ವೇಳೆ ಈತ ಸಾಗುತ್ತಿದ್ದಾಗ ಅಚಾನಕ್ಕಾಗಿ ಗುಂಡು ತಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇನ್ನು ಸಂಭಲ್ ನಲ್ಲಿ ಸರ್ಕಾರಿ ಬಸ್ಸಿಗೆ ಬೆಂಕಿ ಹಚ್ಚಿ, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಲಾಗಿದೆ.
ಬಿಹಾರದ ಪಾಟ್ನ ಹಾಗೂ ಜೆಹಾನಾಬಾದ್ ನಲ್ಲಿ ಬಸ್ಸು ಹಾಗೂ ಕಾರುಗಳನ್ನು ಧ್ವಂಸಗೊಳಿಸಲಾಗಿದೆ. ಅಹಮದಾಬಾದ್ ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ. ಪಶ್ಚಿಮ ಬಂಗಾಳದ ದಿನಾಜ್ ಪುರದಲ್ಲಿ ಕಚ್ಚಾ ಬಾಂಬ್ ಎಸೆತ ನಡೆದಿರುವುದಾಗಿ ವರದಿಗಳು ತಿಳಿಸಿವೆ.
Advertisement