ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಹಿಂಸಾಚಾರದ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿಕೆ ನೀಡಿದ್ದು, ರಾವತ್ ಅವರು ರಾಜಕೀಯ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ರಾವತ್ ಅವರು, ವಿದ್ಯಾರ್ಥಿಗಳು ಸೇರಿದಂತೆ ಜನ ಸಮೂಹಕ್ಕೆ ಬೆಂಕಿ ಹಚ್ಚಲು ಹಾಗೂ ಹಿಂಸಾಚಾರ ನಡೆಸಲು ಮಾರ್ಗದರ್ಶನ ಮಾಡುವುದು ನಾಯಕತ್ವವಲ್ಲ. ಅಂತಹವರು ನಾಯಕರೂ ಅಲ್ಲ ಎಂದು ಹೇಳಿದ್ದರು.
ಇನ್ನು 5 ದಿನಗಳಲ್ಲಿ ಅಂದರೆ ಡಿ.31ರಂದು ನಿವೃತ್ತರಾಗಲಿರುವ ಜನರಲ್ ರಾವತ್ ಅವರು ರಾಜಕೀಯ ಹೇಳಿಕೆ ನೀಡಿದ್ದಾರೆಂದು ಅವರ ಮೇಲೆ ಪ್ರತಿಪಕ್ಷಗಳ ನಾಯಕರು ಮುಗಿಬಿದ್ದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
70 ವರ್ಷಗಳ ಭಾರತೀಯ ಸೇನೆಯ ಇತಿಹಾಸದಲ್ಲಿ ಸಂಪ್ರದಾಯದಿಂದ ವಿಮುಖವಾಗಿರುವುದನ್ನು ರಾವತ್ ಅವರ ರಾಜಕೀಯ ಹೇಳಿಕೆ ಬಿಂಬಿಸುತ್ತಿದೆ ಎಂದು ಹೋರಾಟಗಾರ ಯೋಗೇಂದ್ರ ಯಾವದ್ ಹೇಳಿದ್ದಾರೆ.
ಇಂತಹದ್ದೆಲ್ಲಾ ಪಾಕ್ ಹಾಗೂ ಬಾಂಗ್ಲಾದೇಸದಲ್ಲಿ ನಡೆಯುತ್ತಿತ್ತು. ಸೇನಾ ಮುಖ್ಯಸ್ಥರಿಗೆ ರಾಜಕೀಯ ಬಗ್ಗೆ ಮಾತನಾಡಲು ಬಿಟ್ಟರೆ ಸರ್ಕಾರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಅನುಮತಿ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಟ್ವೀಟ್ ಮಾಡಿದ್ದಾರೆ.
ತಮ್ಮ ಕಾರ್ಯವ್ಯಾಪ್ತಿ ತಿಳಿದುಕೊಳ್ಳುವುದು ಸಹ ನಾಯಕತ್ವ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಚಾಟಿ ಬೀಸಿದ್ದಾರೆ.
Advertisement