ಅಗತ್ಯ ಬಿದ್ದರೆ, ಕೇಂದ್ರ ಪರಿಸರ ಸಚಿವಾಲಯದ ವಿರುದ್ಧವೂ ನಿಲ್ಲುತ್ತೇವೆಂದ ಗೋವಾ ಸಿಎಂ ಪ್ರಮೋದ್ ಸಾವಂತ್
ಪಣಜಿ: ಮಹಾದಾಯಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಪರಿಸರ ಅನುಮತಿ ಬೇಕಾಗಿಲ್ಲ ಎಂದು ಡಿ.24ರಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿರುವುದಕ್ಕೆ ಗೋವಾ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಮಹಾದಾಯಿ ವಿಚಾರ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧವೇ ಸಮರ ಸಾರುವ ಸುಳಿವನ್ನು ಗೋವಾ ಸರ್ಕಾರ ನೀಡಿದ್ದು, ಅಗತ್ಯ ಬಿದ್ದರೆ ಕೇಂದ್ರ ಪರಿಸರ ಸಚಿವಾಲಯದ ವಿರುದ್ಧ ತಿರುಗಿಬೀಳಲು ಸಿದ್ಧ ಎಂದು ಘೋಷಣೆ ಮಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು, ಮಹಾದಾಯಿ ನದಿ ನೀರು ತಿರುಗಿಸುವ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಹೀಗಾಗಿ ಗೋವಾ ಜನರು ಚಿಂತೆ ಪಡಬೇಕಿಲ್ಲ. ಅಗತ್ಯ ಬಿದ್ದರೆ, ಕೇಂದ್ರ ಪರಿಸರ ಸಚಿವಾಲಯದ ವಿರುದ್ಧವೂ ನಿಲ್ಲುತ್ತೇವೆಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಶೀಘ್ರದಲ್ಲಿಯೇ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಹದಾಯಿ ವಿಚಾರ ಕುರಿತು ಚರ್ಚಿಸಲು ಒಂದು ದಿನದ ಅಧಿವೇಶನವನ್ನು ಕರೆಯಬೇಕೆಂದು ಪ್ರತಿಪಕ್ಷ ನಾಯಕ ದಿಗಂಬರ ಕಾಮತ್ ಹೇಳಿಕೆ ಬಗ್ಗೆ ಸಾವಂತ್ ಅವರು ಕಿಡಿಕಾರಿದ್ದಾರೆ.
Advertisement