ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿಂದು ಸರ್ಕಾರದ ವಿರುದ್ಧ ದಾಳಿ ನಡೆಸಿದ ಕಾಂಗ್ರೆಸ್ ಲೋಕಪಾಲ್ ಕಾನೂನು ಜಾರಿಯಾದರೆ ರಾಫೆಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂಬರ್ ಆರೋಪಿಯಾಗಲಿದ್ದಾರೆ ಎಂದು ಹೇಳಿದೆ.
ಮಧ್ಯಂತರ ಬಜೆಟ್ ಚರ್ಚೆಯ ವೇಳೆ ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ, ರಾಫೆಲ್ ಒಪ್ಪಂದದಲ್ಲಿ ಯಾರಿಗಾದರೂ ಶಿಕ್ಷೆಯಾದರೆ, ಅದು ಪ್ರಧಾನಿ ಅವರೊಬ್ಬರಿಗೆ ಮಾತ್ರ ಎಂದರು.
ರಾಫೆಲ್ ವಿವಾದ ಸರ್ಕಾರದ ರಕ್ಷಾಕವಚದ ದುರ್ಬಲತೆಯನ್ನು ಬಹಿರಂಗಪಡಿಸುತ್ತಿದೆ ಎಂದು ತೃಣಮೂಲಕ ಕಾಂಗ್ರೆಸ್ ಸದಸ್ಯ ಸೌಗತ್ ರಾಯ್ ಹೇಳಿದರು.
ರಾಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದ ಸಂಬಂಧ ಇತ್ತೀಚಿನ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಮಾತನಾಡಿದ ವೀರಪ್ಪ ಮೊಯ್ಲಿ, ರಾಫೆಲ್ ಒಪ್ಪಂದ ಮನೆಯಲ್ಲಿಯೇ ಲೂಟಿ ಮಾಡಿದಂತಾಗಿದ್ದು, ಮೋದಿ ಅವರು ಸದ್ಯಕ್ಕೆ ಜವಾಬ್ದಾರಿಯಿಂದ ಪಾರಾಗಬಹುದು ಆದರೆ, ಮುಂದಿನ ದಿನಗಳಲ್ಲಿ ಶಿಕ್ಷೆಯಿಂದ ಬಚಾವ್ ಆಗಲು ಸಾಧ್ಯವಿಲ್ಲ ಎಂದರು.
ಲೋಕಪಾಲ ಕಾನೂನು ಜಾರಿಯಾದರೆ ಪ್ರಧಾನಿ ಮೋದಿ ನಂಬರ್ 1 ಆರೋಪಿಯಾಗುವ ಭೀತಿಯಿಂದ ಅದನ್ನು ಜಾರಿಗೆ ತರುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಈ ವ್ಯವಹಾರದಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದ್ದು, ಭ್ರಷ್ಟಾಚಾರ ತಡೆಗಟ್ಟುವ ಒಂಬಡ್ಸುಮನ್ ನೇಮಕಕ್ಕೆ ಕಾನೂನು ಮಾಡಬೇಕು ಎಂದರು.
ತಪಿತಸ್ಥರಾಗುವ ಭೀತಿಯಿಂದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವೀರಪ್ಪಮೊಯ್ಲಿ ಆರೋಪಿಸಿದರು.
Advertisement