ಜಮ್ಮು: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ಸಿಆರ್ ಪಿಎಫ್ ಯೋಧರ ಮೇಲಿನ ಉಗ್ರರ ದಾಳಿಯನ್ನು ರಾಜ್ಯಪಾಲ ಸತ್ಯಪಾಲ್ ಮಲಿಕ್ ಖಂಡಿಸಿದ್ದು, ಇಂತಹ ಅಟ್ಟಹಾಸಕ್ಕೆ ಭಾರತೀಯ ಸೇನೆ ಎದೆಗುಂದುವುದಿಲ್ಲ ಎಂದು ಹೇಳಿದ್ದಾರೆ.
ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಅವರು, ಆಸ್ಪತ್ರೆಗೆ ದಾಖಲಾಗಿರುವ ಸೈನಿಕರ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.
ಉಗ್ರರ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಪಾಲರು, ಜೈಷೆ ಇ ಮೊಹಮದ್ ಸಂಘಟನೆಯ ಪೈಶಾಚಿಕ ಕೃತ್ಯಕ್ಕೆ ಗಡಿಯಂಚಿನ ಮಾರ್ಗದರ್ಶನ ದೊರಕಿರಬಹುದು. ಇಂತಹ ನಿರಂಕುಶ ಶಕ್ತಿಗಳಿಗೆ ತಕ್ಕ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದೆಲ್ಲಡೆ ಹದ್ದಿನ ಕಣ್ಣಿಡುವಂತೆ ಭದ್ರತಾ ಪಡೆಗಳಿಗೆ ಸೂಚಿಸಿರುವ ರಾಜ್ಯಪಾಲರು, ಪ್ರತಿಯೊಂದು ಅಂಶಗಳ ಬಗ್ಗೆ ಜಿಲ್ಲಾ ವಿಭಾಗೀಯ ನಾಗರಿಕ ಹಾಗೂ ಪೊಲೀಸ್ ಆಡಳಿತಕ್ಕೆ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ.