ನವದೆಹಲಿ: ರಾಷ್ಟ್ರೀಯ ಪೌರರ ನೋಂದಣಿ (ಎನ್ ಆರ್ ಸಿ) ವಿಷಯವಾಗಿ ಗೊಂದಲ ಉಂಟುಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಅಸ್ಸಾಂ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಎನ್ ಆರ್ ಸಿ ಕರಡು ಪ್ರತಿಯಲ್ಲಿ ಅಸ್ಸಾಂ ಸರ್ಕಾರ ಗೊಂದಲ ಉಂಟುಮಾಡಿದೆ. ಅಂತಿಮ ಕರಡು ಪ್ರತಿಯಲ್ಲಿ ಬಿಟ್ಟು ಹೋಗಿರುವ ಭಾರತೀಯರ ಹೆಸರುಗಳನ್ನು ಸೇರಿಸುವುದಕ್ಕೆ ಮರುಪರಿಶೀಲನೆ ನಡೆಸಿಲ್ಲ ಎಂದು ಸುಪ್ರೀಂ ಕೋರ್ಟ್ ಅಸ್ಸಾಂ ಸರ್ಕಾರಕ್ಕೆ ಚಾಟಿ ಬೀಸಿದೆ.
"ಇಷ್ಟೆಲ್ಲಾ ಗೊಂದಲಗಳನ್ನು ಸೃಷ್ಟಿಸಿದರೆ ಅಸ್ಸಾಂ ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸ ಹೇಗಿರುವುದಕ್ಕೆ ಸಾಧ್ಯ"? ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿದ್ದ ಪೀಠ ಪ್ರಶ್ನಿಸಿದೆ.
ಅಸ್ಸಾಂ ಎನ್ಆರ್ ಸಿಯಲ್ಲಿ 40 ಲಕ್ಷ ಜನರನ್ನು ಸೇರಿಸಿಲ್ಲ, ಅಂದರೆ ಅವರು ಮೇಲ್ನೋಟಕ್ಕೆ ವಿದೇಶಿಗರು ಆದರೆ ಟ್ರಿಬ್ಯುನಲ್ ಪ್ರಕಾರ ಕೇವಲ 52,000 ಜನ ವಿದೇಶಿಗರಿದ್ದಾರೆ. ಈ ಸರ್ಕಾರ 162 ಜನರನ್ನು ಮಾತ್ರ ಗಡಿಪಾರು ಮಾಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.