ನವದೆಹಲಿ: ಸ್ಥಳೀಯ ಖೈದಿಗಳಿಗೆ ಬ್ರೈನ್ ವಾಶ್ ಮಾಡುತ್ತಿರುವ ಆರೋಪದ ಮೇರೆಗೆ ಪಾಕಿಸ್ತಾನ ಏಳು ಉಗ್ರರನ್ನು ಜಮ್ಮುವಿನ ಜೈಲಿನಿಂದ ತಿಹಾರ್ ಜೈಲಿಗೆ ಸ್ಥಳಾಂತರಿಸಬೇಕೆಂದು ಕೋರಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಈ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಎಲ್ ಎನ್ ರಾವ್ ಹಾಗೂ ಎಂಆರ್ ಶಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸೂಚಿಸಿದೆ.
ಜಮ್ಮು- ಕಾಶ್ಮೀರ ಜೈಲಿನಲ್ಲಿರುವ ಪಾಕಿಸ್ತಾನದ ವಿವಿಧ ಸಂಘಟನೆಯ ಉಗ್ರರು ಸ್ಥಳೀಯ ಖೈದಿಗಳನ್ನು ಬ್ರೈನ್ ವಾಶ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರನ್ನು ಅಲ್ಲಿನ ಜೈಲಿನಿಂದ ಬೇರೆಡೆಗೆ ಸ್ಥಳಾಂತರಿಸಬೇಕಾದ ಅಗತ್ಯವಿದೆ ಎಂದು ಜಮ್ಮು- ಕಾಶ್ಮೀರ ಸರ್ಕಾರ ಪರ ವಕೀಲ ಶೋಯೆಬ್ ಅಲಮ್ ಹೇಳಿದ್ದಾರೆ.
ಒಂದು ವೇಳೆ ತಿಹಾರ್ ಜೈಲಿಗೆ ಸ್ಥಳಾಂತರ ಸಾಧ್ಯವಾದ ಪಕ್ಷದಲ್ಲಿ ಹೆಚ್ಚಿನ ಭದ್ರತೆ ಇರುವ ಹರಿಯಾಣ ಮತ್ತು ಪಂಜಾಬ್ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಅವರು ಕೋರಿದ್ದಾರೆ.
ನೋಟಿಸ್ ಪ್ರತಿಯನ್ನು ಏಳು ಉಗ್ರರಿಗೂ ಹಂಚುವಂತೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಪೀಠ ತಿಳಿಸಿದ್ದು, ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ಫೆಬ್ರವರಿ 14 ರಂದು ಪುಲ್ವಾಮಾ ಉಗ್ರರ ದಾಳಿ ನಡೆದ ಮಾರನೇ ದಿನವೇ ಜಮ್ಮು ಜೈಲಿನಲ್ಲಿರುವ ಲಷ್ಕರ್ -ಇ- ತೊಯ್ಬಾ ಸಂಘಟನೆಯ ಉಗ್ರರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ಅಲ್ಲಿನ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
Advertisement