ಅರುಣ್ ಜೇಟ್ಲಿ ಸವಾಲಿಗೆ ನಾವು ಸಿದ್ಧ, ಸಮಯ ನಿಗದಿ ಮಾಡಿ ಎಂದ ಮಲ್ಲಿಕಾರ್ಜುನ ಖರ್ಗೆ

ರಾಫೆಲ್ ಯುದ್ದ ವಿಮಾನ ಖರೀದಿ ವಿವಾದ ಸಂಬಂಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಕಿರುವ ಸವಾಲಿಗೆ ನಾವು ಸಿದ್ಧರಿದ್ದು, ಚರ್ಚೆಗೆ ನೀವೆ ಸಮಯ ನಿಗದಿ ಮಾಡಿ ಎಂದು ಕಾಂಗ್ರೆಸ್ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ರಾಫೆಲ್ ಯುದ್ದ ವಿಮಾನ ಖರೀದಿ ವಿವಾದ ಸಂಬಂಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಕಿರುವ ಸವಾಲಿಗೆ ನಾವು ಸಿದ್ಧರಿದ್ದು, ಚರ್ಚೆಗೆ ನೀವೆ ಸಮಯ ನಿಗದಿ ಮಾಡಿ ಎಂದು ಕಾಂಗ್ರೆಸ್ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಫೆಲ್​ ಒಪ್ಪಂದದ ಕುರಿತು ಸೋಮವಾರ ಲೋಕಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದೆ. ರಫೇಲ್​ ಕುರಿತ ಚರ್ಚೆಗೆ ಬನ್ನಿ, ಓಡಿಹೋಗಬೇಡಿ ಎಂಬ ವಿತ್ತ ಸಚಿವ ಅರುಣ್​ ಜೇಟ್ಲಿ ಅವರ ಸವಾಲು ಸ್ವೀಕರಿಸಿದ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, 'ಚರ್ಚೆಗೆ ನಾವು ಸಿದ್ಧ. ಜನವರಿ 2ರಂದು ಸಮಯ ನಿಗದಿ ಮಾಡಿ,' ಎಂದು ಹೇಳಿದ್ದಾರೆ.
'ಜೇಟ್ಲಿ ಜೀ ನಮಗೆ ಸವಾಲೆಸೆದಿದ್ದಾರೆ. ನಾವು ಒಪ್ಪಿಕೊಂಡಿದ್ದೇವೆ. ಜನವರಿ 2 ರಂದು ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ದಯವಿಟ್ಟು ಸಮಯ ನಿಗದಿ ಮಾಡಿ ಎಂದು ಖರ್ಗೆ ಹೇಳಿದ್ದಾರೆ. 
ಈ ಹಿಂದೆ ಖರ್ಗೆ ಅಂತೆಯೇ ರಾಫೆಲ್ ಒಪ್ಪಂದದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿವ ಜೇಟ್ಲಿ, ರಾಫೆಲ್ ಬಗ್ಗೆ ಚರ್ಚೆ ಆರಂಭಿಸಿ, ನಾವು ಉತ್ತರಕ್ಕೆ ಸಿದ್ಧರಿದ್ದೇವೆ. ಕಾಂಗ್ರೆಸ್ ಸುಳ್ಳು ಪ್ರಚಾರದಲ್ಲಿ ತೊಡಗಿದೆ ಎಂದು ನಿರೂಪಿಸುತ್ತೇವೆ,' ಎಂದು ಜೇಟ್ಲಿ ಸವಾಲು ಎಸೆದರು. ಆಗ ಖರ್ಗೆ ಅವರು ಸವಾಲು ಒಪ್ಪಿರುವುದಾಗಿ ತಿಳಿಸಿದರು.
ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷ ಸಂಸದರು ಸ್ಪೀಕರ್ ಸುಮಿತ್ರಾ ಮಹಾಜನ್ ಎದುರು ರಾಫೆಲ್ ತನಿಖೆ ಕುರಿತು ಪ್ರತಿಭಟನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com