ಜಲಂಧರ್: ಶೀಘ್ರದಲ್ಲೇ ಚಾಲನ ಪರವಾನಗಿ(ಡಿಎಲ್)ಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಭಾನುವಾರ ಹೇಳಿದ್ದಾರೆ.
ಇಂದು 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಿದ ರವಿಶಂಕರ್ ಪ್ರಸಾದ್ ಅವರು, ಡಿಎಲ್ ಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವ ಕಾನೂನು ಜಾರಿಗೆ ತರಲಾಗುವುದು ಎಂದರು.
ಪ್ರಸ್ತುತ ಅಪಘಾತಗಳಾದಾಗ ಅದಕ್ಕೆ ಕಾರಣನಾದ ವ್ಯಕ್ತಿ ತಪ್ಪಿಸಿಕೊಂಡು ನಕಲಿ ಡಿಎಲ್ ನೀಡುವ ಸಾಧ್ಯತೆಯೂ ಇದೆ. ಆದರೆ ಡಿಎಲ್ ಗೆ ಆಧಾರ್ ಲಿಂಕ್ ಮಾಡುವುದರಿಂದ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ನೀವು ನಿಮ್ಮ ಹೆಸರು ಬದಲಿಸಬಹುದು. ಆದರೆ, ಬಯೋಮೆಟ್ರಿಕ್ ಬದಲಿಸಲಾಗದು. ಡಿಎಲ್ ನಕಲು ಮಾಡಲು ಸಾಧ್ಯವಾಗುವುದಿಲ್ಲ' ಎಂದು ಸಚಿವರು ಹೇಳಿದ್ದಾರೆ.