ತೂತುಕುಡಿ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೇ ಯಾರು ನೀನು? ಎಂದು ಕೇಳಿದ್ದ ತೂತುಕುಡಿಯ ವಿದ್ಯಾರ್ಥಿ ಕೆ ಸಂತೋಷ್ ರಾಜ್ ಅವರನ್ನು ತಮಿಳುನಾಡು ಪೊಲೀಸರು ಗುರುವಾರ ಬಂಧಿಸಿದ್ದಾರೆ.
22 ವರ್ಷದ ಸಂತೋಷ್ ರಾಜ್ ಅವರು ಎಲ್ಲಾ ಕಾಲೇಜ್ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿದ್ದು, ಸ್ಟೆರ್ಲೈಟ್ ತಾಮ್ರ ಘಟಕದ ವಿರುದ್ಧ ಮತ್ತೆ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ ರಾಜ್ ಅವರು ಸ್ಟೆರ್ಲೈಟ್ ವಿರುದ್ಧ ಪ್ರತಿಭಟನೆಗೆ ಪ್ರಚೋದನೆ ನೀಡುವ ಭಿತ್ತಿ ಪತ್ರಗಳನ್ನು ಹಂಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಕಾಂ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ಸಂತೋಷ್ ರಾಜ್, ಶಿಕ್ಷಣಕ್ಕೆ ಗುಡ್ ಬೈ ಹೇಳಿ ಸ್ಟೆರ್ಲೈಟ್ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿದ್ದಾರೆ.
ಈ ಹಿಂದೆ ಸ್ಟೆರ್ಲೈಟ್ ವಿರೋಧಿ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರನ್ನು ಸಂತೈಸಲು ಆಗಮಿಸಿದ್ದ ರಜನಿಕಾಂತ್ ಅವರನ್ನು ಸಂತೋಷ್ ರಾಜ್ 'ಯಾರು ನೀನು?' ಎಂದು ಪ್ರಶ್ನಿಸುವ ಮೂಲಕ ಸುದ್ದಿಯಾಗಿದ್ದರು.