ಶಬರಿಮಲೆಗೆ ಹೋಗಲು ಯತ್ನಿಸಿದ್ದ ಇಬ್ಬರು ಮಹಿಳೆಯರನ್ನು ವಾಪಸ್ ಕಳುಹಿಸಿದ ಪೊಲೀಸರು
ಶಬರಿಮಲೆ: ಅಯ್ಯಪ್ಪ ಸ್ವಾಮಿಯ ದೇಗುಲ ಪ್ರವೇಶಿಸಲು ಬೆಟ್ಟ ಹತ್ತಲು ಯತ್ನಿಸಿದ್ದ 50 ವರ್ಷಕ್ಕಿಂತ ಕೆಳಗಿನ ಇಬ್ಬರು ಮಹಿಳೆಯರನ್ನು ಶನಿವಾರ ನಸುಕಿನ ಜಾವ ಪೊಲೀಸರು ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಬಲಪಂಥೀಯ ಸಂಘಟನೆಗಳಿಂದ ಹೊರಗೆ ಪ್ರತಿಭಟನೆ ನಡೆಯುತ್ತಿರುವುದರಿಂದ ರಕ್ಷಣೆ ನೀಡುವುದು ಕಷ್ಟ ಎಂದು ಪೊಲೀಸರು ಹೇಳಿದ್ದರಿಂದ ಮಹಿಳೆಯರು ಹಿಂತಿರುಗಿ ಬರಬೇಕಾಯಿತು.
ಕಳೆದ 16ರಂದು ಬೆಟ್ಟ ಹತ್ತಿ ಅಯ್ಯಪ್ಪನ ದರುಶನ ಮಾಡಲು ರೇಶ್ಮ ನಿಶಾಂತ್ ಮತ್ತು ಶಲೀನಾ ಸಾಜೇಶ್ ಎಂಬ ಇಬ್ಬರು ಮಹಿಳೆಯರು ಯತ್ನಿಸಿದ್ದರು. ಆದರೆ ಪ್ರತಿಭಟನೆಯಿಂದಾಗಿ ವಾಹಸ್ ಬರಬೇಕಾಯಿತು. ಸುಮಾರು 30 ವರ್ಷ ಆಸುಪಾಸಿನಲ್ಲಿರುವ ಇವರಿಬ್ಬರೂ 41 ದಿನಗಳ ವೃತವನ್ನು ಕೈಗೊಂಡು ಬಂದಿರುವುದಾಗಿ ಹೇಳಿದ್ದರು.ಇಂದು ಬೆಳಗ್ಗೆ ಮತ್ತೆ ಬೆಟ್ಟ ಹತ್ತಬೇಕೆಂದು ಬೆಳಗ್ಗೆ 5 ಗಂಟೆ ಸುಮಾರಿಗೆ ನಿಲಕ್ಕಲ್ ಮೂಲ ಶಿಬಿರದ ಬಳಿ ಬಂದಿದ್ದರು.
ಇಂದು ಬೆಳಗ್ಗೆಯಿಂದಲೇ ಅಯ್ಯಪ್ಪ ಬೆಟ್ಟಕ್ಕೆ ಹತ್ತುವವರ ಸಂಖ್ಯೆ ಅಧಿಕವಾಗಿತ್ತು. ಹೀಗಾಗಿ ಪೊಲೀಸರು ಅವರನ್ನು ನಿಯಂತ್ರಣ ಕೊಠಡಿಗೆ ಕರೆದುಕೊಂಡು ಹೋಗಿ ಇರುವ ಸಮಸ್ಯೆ ಬಗ್ಗೆ ಮನದಟ್ಟು ಮಾಡಿದರು.
ಪುರುಗಮನ ನವತೊಣ ಕೂಟಯಿಮ್ಮ ಎಂಬ ಗುಂಪಿನ ಆರು ಮಂದಿ ಈ ಇಬ್ಬರು ಮಹಿಳೆಯರೊಂದಿಗೆ ಬಂದಿದ್ದು ಅವರು ಕೂಡ ದೇವರ ದರ್ಶನ ಪಡೆಯದೆ ಹಿಂತಿರುಗಬೇಕಾಯಿತು.