ನವದೆಹಲಿ: ಸುಪ್ರೀಂ ಕೋರ್ಟ್ ಅಯೋಧ್ಯ ವಿವಾದ ವಿಚಾರಣೆ ಮುಂದೂಡಿದ ಬೆನ್ನಲ್ಲೇ ಆದಷ್ಟು ಬೇಗ ಅಯೋಧ್ಯ ವಿವಾದ ಇತ್ಯರ್ಥಪಡಿಸಬೇಕು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಸೋಮವಾರ ಹೇಳಿದ್ದಾರೆ.
ಶುಕ್ರವಾರವಷ್ಟೇ ಅಯೋಧ್ಯ ವಿವಾದ ವಿಚಾರಣೆಗೆ ಸಂಬಂಧಿಸಿದಂತೆ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ರಚಿಸಲಾಗಿತ್ತು. ಆದರೆ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಜನವರಿ 29 ರಂದು ನಡೆಯಬೇಕಿದ್ದ ಅಯೋಧ್ಯ ವಿವಾದದ ವಿಚಾರಣೆ ಮುಂದೂಡಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರವಿಶಂಕರ್ ಪ್ರಸಾದ್ ಅವರು, ಎಪ್ಪತ್ತು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ಅಯೋಧ್ಯೆ ವಿವಾದಕ್ಕೆ ಆದಷ್ಟು ಬೇಗ ತಿಲಾಂಜಲಿ ಹಾಡಬೇಕು ಎಂದಿದ್ದಾರೆ.
ಈ ದೇಶದ ಜನ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ನೋಡಲು ತವಕದಿಂದ ಕಾಯುತ್ತಿದ್ದಾರೆ. ಒಬ್ಬ ನಾಗರಿಕನಾಗಿ ನಾನು ಹೇಳುವುದಿಷ್ಟೆ. ಎಪ್ಪತ್ತು ವರ್ಷಗಳಿಂದ ಇತ್ಯರ್ಥವಾಗದೆ ಉಳಿದ ಈ ಪ್ರಕರಣ ಆದಷ್ಟು ಬೇಗ ಬಗೆಹರಿಯಬೇಕು ಎಂದರು.