ಕೋಲ್ಕತ್ತಾ: ಮಂಗಳಸೂತ್ರ, ಸಿಂಧೂರ ಧರಿಸಿ ರಥ ಯಾತ್ರೆಯಲ್ಲಿ ಪಾಲ್ಗೊಂಡ ನುಸ್ರತ್ ಜಹಾನ್ ಹೇಳಿದ್ದೇನು?

ಸೀರೆ ಉಟ್ಟು, ಮಂಗಳಸೂತ್ರ, ಬಳೆ ಮತ್ತು ಸಿಂಧೂರ ತೊಟ್ಟು ಸಂಸತ್ತಿಗೆ ಆಗಮಿಸಿದ್ದನ್ನು ವಿರೋಧಿಸಿ ...
ನುಸ್ರತ್ ಜಹಾನ್
ನುಸ್ರತ್ ಜಹಾನ್
ಕೋಲ್ಕತ್ತಾ: ಸೀರೆ ಉಟ್ಟು, ಮಂಗಳಸೂತ್ರ, ಬಳೆ ಮತ್ತು ಸಿಂಧೂರ ತೊಟ್ಟು ಸಂಸತ್ತಿಗೆ ಆಗಮಿಸಿದ್ದನ್ನು ವಿರೋಧಿಸಿ ಮೌಲ್ವಿಗಳಿಂದ ಫತ್ವಾ ಹೊರಡಿಸಿಕೊಂಡಿದ್ದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಗುರುವಾರ ಕೋಲ್ಕತ್ತಾದ ಇಸ್ಕಾನ್ ರಥಯಾತ್ರೆ ಉತ್ಸವದಲ್ಲಿ ಭಾಗವಹಿಸಿದರು.
ಇಸ್ಕಾನ್ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟನೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೆರವೇರಿಸಿದ್ದು ಸಂಸದೆ ನುಸ್ರತ್ ಜಹಾನ್ ಭಾಗಿಯಾಗಿದ್ದರು.
ತಮ್ಮ ವಿರುದ್ಧ ಹೊರಡಿಸಿರುವ ಫತ್ವಾ ಬಗ್ಗೆ ಪ್ರತಿಕ್ರಿಯಿಸಿದ ನುಸ್ರತ್ ಜಹಾನ್, ಆಧಾರರಹಿತ ಸುದ್ದಿ, ಆರೋಪಗಳಿಗೆ ನಾನು ಬೆಲೆ ಕೊಡುವುದಿಲ್ಲ, ನನ್ನ ಧರ್ಮದ ಬಗ್ಗೆ ನನಗೆ ಗೊತ್ತಿದೆ.
ಹುಟ್ಟಿನಿಂದ ನಾನು ಮುಸಲ್ಮಾನಳಾಗಿದ್ದು ಇನ್ನೂ ಕೂಡ ಮುಸಲ್ಮಾನಳಾಗಿಯೇ ಉಳಿದಿದ್ದೇನೆ, ಅದು ನಮ್ಮ ನಂಬಿಕೆಗೆ ಬಿಟ್ಟ ವಿಷಯ. ಅದನ್ನು ನಾವು ನಮ್ಮ ಹೃದಯದೊಳಗೆ ಅನುಭವಿಸಬೇಕೆ ಹೊರತು ತಲೆಯಲ್ಲಿ ಅಲ್ಲ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.
ಇಂದು ಸಹ ನುಸ್ರತ್ ಸೀರೆ, ಮಂಗಳಸೂತ್ರ ಮತ್ತು ಸಿಂಧೂರ ಧರಿಸಿ ಹಿಂದೂ ಭಕ್ತರಂತೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೆ ನಿಖಿಲ್ ಜೈನ್ ಎಂಬ ಉದ್ಯಮಿಯನ್ನು ಮದುವೆಯಾಗಿರುವ ನುಸ್ರತ್ ಜಹಾನ್ ತಮ್ಮ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. 
ನವ ಭಾರತವನ್ನು ನುಸ್ರತ್ ಜಹಾನ್ ಪ್ರತಿನಿಧಿಸುತ್ತಿದ್ದಾರೆ. ಅದು ಎಲ್ಲರನ್ನೂ ಒಳಗೊಂಡ ನವ ಭಾರತ. ಅನ್ಯ ಧರ್ಮಗಳನ್ನು ಗೌರವಿಸುವುದು ಮತ್ತು ಅನ್ಯ ಧರ್ಮೀಯರ ಉತ್ಸವಗಳಲ್ಲಿ ಭಾಗಿಯಾಗುವ ಮೂಲಕ ಭಾರತದ ಹೊಸ ಶಕೆ ಆರಂಭಕ್ಕೆ ಇದಿರು ನೋಡುತ್ತಿದ್ದಾರೆ. ನುಸ್ರತ್ ಜಹಾನ್ ನಂತಹ ಯುವಕ-ಯುವತಿಯರು ಹೊಸ ಬೆಳವಣಿಗೆಯ ಭಾರತವನ್ನು ಎದುರು ನೋಡುತ್ತಿದ್ದಾರೆ ಎಂದು ಇಸ್ಕಾನ್ ವಕ್ತಾರರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com