ಅನುಮಾನ ತಂದ ಎಡವಟ್ಟು..! ನಾಯಿಗಳಿಗೆ ಹೆದರಿ ಅವಿತಿದ್ದವನ ಕಳ್ಳ ಎಂದು ಭಾವಿಸಿ ಬೆಂಕಿ ಇಟ್ಟರು!

ಗ್ರಾಮಸ್ಥರ ಸಣ್ಣ ಅನುಮಾನವೊಂದು ಅಮಾಯಕ ವ್ಯಕ್ತಿ ಸಾವು-ಬದುಕಿನ ನಡುವೆ ಹೋರಾಟ ಮಾಡುವಂತಹ ಸ್ಥಿತಿ ತಂದಿಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಗ್ರಾಮಸ್ಥರ ಸಣ್ಣ ಅನುಮಾನವೊಂದು ಅಮಾಯಕ ವ್ಯಕ್ತಿ ಸಾವು-ಬದುಕಿನ ನಡುವೆ ಹೋರಾಟ ಮಾಡುವಂತಹ ಸ್ಥಿತಿ ತಂದಿಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತಡರಾತ್ರಿಯಲ್ಲೇ ತನ್ನ ಪತ್ನಿಯ ಕಾಣಲು ಅತ್ತೆ ಮನೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಕಳ್ಳ ಎಂದು ಭಾವಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಲ್ಲದೇ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. 
ಉತ್ತರ ಪ್ರದೇಶದ ಬಾರಾಬಂಕಿ ಬಳಿಯ ರಾಘೋಪುರ್​ ಎಂಬ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದು, ತಿಂದೋಲಾ ಗ್ರಾಮದ ನಿವಾಸಿ ಸುಜಿತ್​ ಕುಮಾರ್ ಎಂಬಾತ ಇಲ್ಲಿನ​ ಟಾಯಿ ಕಲಾ ಗ್ರಾಮದಲ್ಲಿರುವ ತನ್ನ ಅತ್ತೆ ಮನೆಗೆ ತೆರಳುತ್ತಿದ್ದ. ವೃತ್ತಿಯಲ್ಲಿ ಪೇಂಟರ್​ ಆಗಿರುವ ಸುಜಿತ್ ಕುಮಾರ್ ಶುಕ್ರವಾರ ರಾತ್ರಿ ಹೋಗುತ್ತಿದ್ದಾಗ ನಾಯಿಗಳು ಬೆನ್ನಟ್ಟಿವೆ. ಅದರಿಂದ ಭಯಗೊಂಡ ಸುಜಿತ್ ಕುಮಾರ್, ನಾಯಿಗಳಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇದ್ದ ಮನೆಯೊಳಗೆ ನುಗ್ಗಿ ಅವಿತುಕೊಂಡಿದ್ದಾನೆ. ಈ ವೇಳೆ ಮನೆಯವರು ಈತನನ್ನು ಕಂಡು ಕಳ್ಳ ಕಳ್ಳ ಎಂದು ಕೂಗಿದ್ದಾರೆ.
ಕೂಡಲೇ ಅಕ್ಕಪಕ್ಕದ ಮನೆಯವರು ಸೇರಿಕೊಂಡು ಸುಜಿತ್ ಕುಮಾರ್ ರನ್ನು ಹಿಡಿದು ಕಟ್ಟಿಹಾಕಿ ಮನಸೋ ಇಚ್ಛೆ ಥಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಆತನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಈ ವೇಳೆ ಸುಜಿತ್ ಕುಮಾರ್ ರನ್ನು ಗುರುತಿಸಿದ ಸ್ಥಳೀಯರೊಬ್ಬರು ಈ ವಿಚಾರವನ್ನು ಗ್ರಾಮಸ್ಥರಿಗೆ ಹೇಳಿ ಅವರನ್ನು ರಕ್ಷಿಸಿದ್ದಾರೆ. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಸುಜಿತ್ ಕುಮಾರ್ ರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಸುಜಿತ್ ಕುಮಾರ್ ಪತ್ನಿ ಪೂನಂ ಗ್ರಾಮಸ್ಥರ ವಿರುದ್ಧ ದೂರು ನೀಡಿದ್ದು,  ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.
ಇಬ್ಬರ ಬಂಧನ
ಪ್ರಕರಣ ಸಂಬಂಧ ಪೊಲೀಸರು ಉಮೇಶ್​ ಯಾದವ್​ ಮತ್ತು ಶ್ರವಣ್​ ಯಾದವ್​ ಅವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com